ADVERTISEMENT

ಭಟ್ಟರಹಳ್ಳಿ: ವಿದ್ಯಾರ್ಥಿಗಳ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 15:11 IST
Last Updated 17 ಡಿಸೆಂಬರ್ 2019, 15:11 IST

ಕೋಲಾರ: ತಾಲ್ಲೂಕಿನ ಭಟ್ಟರಹಳ್ಳಿ ಗ್ರಾಮದ ನ್ಯೂಜ್ಯೋತಿ ವಿದ್ಯಾಸಂಸ್ಥೆಯ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೋಮವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ತಾಲ್ಲೂಕಿನ ನಡುಪಳ್ಳಿ ಗ್ರಾಮದ ರಚಿತ್ (16) ಮತ್ತು ಹರಳಕುಂಟೆ ಗ್ರಾಮದ ರವಿತೇಜ (16) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಗಳು. ಇವರಿಬ್ಬರೂ ಮಧ್ಯಾಹ್ನ ಊಟದ ಸಮಯದಲ್ಲಿ ಶಾಲೆಯ ಪಕ್ಕದ ನೀಲಗಿರಿ ತೋಪಿನ ಹೋಗಿ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟದ ಸಮಯ ಮುಗಿದ ನಂತರ ಶಾಲೆಗೆ ಮರಳಿದ ಇವರಿಬ್ಬರೂ ಸ್ವಲ್ಪ ಸಮಯದಲ್ಲೇ ತರಗತಿಯಲ್ಲಿ ಅಸ್ವಸ್ಥಗೊಂಡಿದ್ದಾರೆ. ಇಬ್ಬರ ಬಾಯಲ್ಲೂ ನೊರೆ ಬರುತ್ತಿರುವುದನ್ನು ನೋಡಿದ ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಕೀಟನಾಶಕ ಕುಡಿದಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ರವಿತೇಜ ಬೆಳಿಗ್ಗೆ ಶಾಲೆಗೆ ಬರುವಾಗಲೇ ಬ್ಯಾಗ್‌ನಲ್ಲಿ ಕೀಟನಾಶಕದ ಬಾಟಲಿ ತೆಗೆದುಕೊಂಡು ಬಂದಿದ್ದ ಎಂದು ಸಹಪಾಠಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ರಚಿತ್‌ ಮತ್ತು ರವಿತೇಜನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಚಿತ್‌ನ ತಂದೆ ಗೋಪಾಲ್‌ ಕೃಷಿಕರಾಗಿದ್ದಾರೆ. ರವಿತೇಜನ ತಂದೆ ಮುನಿರಾಜು ಗಾರೆ ಕೆಲಸ ಮಾಡುತ್ತಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.