
ಕೋಲಾರ: ಆಮ್ ಆದ್ಮಿ ಪಕ್ಷದ ವರಿಷ್ಠ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅಬಕಾರಿ ಹಗರಣದಲ್ಲಿ ನ್ಯಾಯಾಲಯವು ಖುಲಾಸೆಗೊಳಿಸಿರುವುದು ಸಂವಿಧಾನ ಹಾಗೂ ನ್ಯಾಯಕ್ಕೆ ಸಂದ ಜಯ. ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹೇಳಿದ್ದಾರೆ.
ರಾಜಕೀಯವಾಗಿ ಮುಗಿಸಲು ಹಾಗೂ ಅಧಿಕಾರ ಹಿಡಿಯಲು ಕೇಜ್ರಿವಾಲ್ ಅವರಿಗೆ ಇಷ್ಟು ದಿನ ಸುಖಾಸುಮ್ಮನೇ ತೊಂದರೆ ಕೊಡಲಾಯಿತು, ಜೈಲಿಗೆ ಕಳಿಸಲಾಯಿತು. ಸಣ್ಣ ಪಕ್ಷಗಳು ಬೆಳೆಯುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮ ಪಕ್ಷವು ದೆಹಲಿಯಲ್ಲಿ ಮೂರು ಬಾರಿ ಆಡಳಿತ ನಡೆಸಿದೆ. ಆದರೆ, ಬಿಜೆಪಿಯ ಅಪಪ್ರಚಾರ, ಕುತಂತ್ರದಿಂದಾಗಿ ಕಳೆದ ಬಾರಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಸುಳ್ಳು ಪ್ರಕರಣ ದಾಖಲಿಸಿ ವಿರೋಧ ಪಕ್ಷಗಳನ್ನು ದಮನ ಮಾಡುವ ಬಿಜೆಪಿ ಸಂಚು ಇದಾಗಿದೆ ಎಂದಿದ್ದಾರೆ.
ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಇಡೀ ದೇಶಕ್ಕೆ ಮಾದರಿ ಆಡಳಿತ ನಡೆಸಿದರು. ಅಭಿವೃದ್ಧಿಯಲ್ಲಿ ದೆಹಲಿ ಮುಂದೆ ಇತ್ತು. ಆ ಮಾದರಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಮುಂದೆಯೂ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ದೇಶದಲ್ಲಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ತಿಳಿಸಿದ್ದಾರೆ.
ಇಷ್ಟು ದಿನ ಮಾನಸಿಕ ಯಾತನೆ ಅನುಭವಿಸಿದ ಕೇಜ್ರಿವಾಲ್ ಅವರಿಗೆ ಕೊನೆಗೂ ನ್ಯಾಯ ದೊರೆತಿದೆ. ಈ ಸಂಬಂಧ ಅವರಲ್ಲಿ ಬಿಜೆಪಿಯವರು ಕ್ಷಮೆಯಾಚಿಸಿ ಇನ್ನುಮುಂದಾದರೂ ನ್ಯಾಯಯುತವಾಗಿ ನಡೆದುಕೊಳ್ಳಲಿ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.