ADVERTISEMENT

ಲಂಚ: ಜಿಲ್ಲಾ ಶಸ್ತ್ರಚಿಕಿತ್ಸಕರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:37 IST
Last Updated 22 ಡಿಸೆಂಬರ್ 2021, 4:37 IST

ಕೋಲಾರ: ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ಸಾಮಗ್ರಿಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಎಚ್‌.ರವಿಕುಮಾರ್‌ ಮತ್ತು ಸಹಾಯಕ ಆಡಳಿತಾಧಿಕಾರಿ ಗೋಪಾಲಕೃಷ್ಣ ಅವರು ಇಲ್ಲಿ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಗುತ್ತಿಗೆದಾರ ಕಿರಣ್‌ಕುಮಾರ್‌ ಎಂಬುವರು ಎಸ್‌ಎನ್‌ಆರ್‌ ಆಸ್ಪತ್ರೆಗೆ ಕೋವಿಡ್‌ ಸಂದರ್ಭದಲ್ಲಿ ರೋಗಿಗಳ ಬಳಕೆಗಾಗಿ ಪ್ಲೇಟ್‌ ಮತ್ತು ಲೋಟಗಳನ್ನು ಸರಬರಾಜು ಮಾಡಿದ್ದರು. ಇದರ ಬಿಲ್‌ನ ಮೊತ್ತ ₹ 2.50 ಲಕ್ಷ ಮಂಜೂರು ಮಾಡಲು ಗೋಪಾಲಕೃಷ್ಣ ₹ 20 ಸಾವಿರ ಲಂಚ ಮತ್ತು ರವಿಕುಮಾರ್‌ ಅವರಿಗೆ ಬಿಲ್‌ನ ಶೇ 10ರಷ್ಟು ಹಣವನ್ನು ಕಮಿಷನ್‌ ಆಗಿ ಕೊಡಬೇಕೆಂದು ಗುತ್ತಿಗೆದಾರರಿಗೆ ಕೇಳಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಗುತ್ತಿಗೆದಾರ ಕಿರಣ್‌ಕುಮಾರ್‌ ಎಸಿಬಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ರವಿಕುಮಾರ್‌ ಮತ್ತು ಗೋಪಾಲಕೃಷ್ಣ ಅವರನ್ನು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ.

ADVERTISEMENT

ಆರೋಪಿಗಳಿಂದ ₹ 25 ಸಾವಿರ ವಶಪಡಿಸಿಕೊಳ್ಳಲಾಗಿದೆ. ಅವರಿಬ್ಬರನ್ನೂ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.