ಕೋಲಾರ: ‘ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡಿದರೆ ಸಹಿಸಲ್ಲ, ಅಧಿಕಾರದಲ್ಲಿ ಇರುವವರು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಉತ್ತಮ’ ಎಂದು ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಕೆ ನೀಡಿದರು.
ನಗರ ಹೊರವಲಯದ ಕೋಚಿಮುಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ನಾಯಕರು, ನನ್ನ ಪಕ್ಷದ ಬಗ್ಗೆ ಇಲ್ಲಸಲ್ಲದ್ದನ್ನು ನನ್ನ ಎದುರು ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ’ ಎಂದು ತಿರುಗೇಟು ನೀಡಿದರು.
‘ಜಿಲ್ಲೆಯಲ್ಲಿ ಯಾರು ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ ಎಂಬ ಅರಿವು ಜನಕ್ಕೆ ಇದೆ. ಅತಿ ಶೀಘ್ರದಲ್ಲೇ ಇದಕ್ಕೆ ಉತ್ತರ ಸಿಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ಜನಪ್ರತಿನಿಧಿ ಜವಾಬ್ದಾರಿಯಿಂದ ಮಾತನಾಡಬೇಕು’ ಎಂದು ಸಲಹೆ ನೀಡಿದರು.
ರೈಲು ತಯಾರಿಕ ಘಟಕದ ವಿಚಾರವಾಗಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಮ್ಮ ಪಕ್ಷದ ನಾಯಕರು ರಿಯಲ್ ಎಸ್ಟೇಟ್ ಮಾಡುವವರಲ್ಲ. ಅಂತಹ ಕೆಲಸ ಮಾಡುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಬಿಡಿ’ ಎಂದು ಹೇಳಿದರು.
‘ರೈಲು ತಯಾರಿಕ ಘಟಕ ಸ್ಥಾಪನೆಗೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿರುವ ಮಾಜಿ ಸಂಸದ ಕೆ.ಎಚ್.ಮುನಿಯಪ್ಪವರಿಗೆ ನಾನು ಬೆಂಬಲ ನೀಡುತ್ತೆನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಾಯಕರಾದ ಕೆ.ಎಚ್.ಮುನಿಯಪ್ಪ, ರಮೇಶ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ನಾನು ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಅವರ ಹೇಳಿಕೆಗೆ ಸಂಪೂರ್ಣ ಸಹಮತ ಇದೆ’ ಎಂದು ತಿಳಿಸಿದರು.
ಕೋಚಿಮುಲ್ ಒಕ್ಕೂಟಕ್ಕೆ ಸಂಸದರು ಮಾತ್ರವಲ್ಲದೆ ಅವಿಭಜಿತ ಜಿಲ್ಲೆಯ ಮಂತ್ರಿಗಳು, ಎಲ್ಲಾ ಶಾಸಕರು ಯಾವುದೇ ಸಮಯದಲ್ಲಾರೂ ಭೇಟಿ ನೀಡಲಿ. ಆಹ್ವಾನಿಸಲು ನಾವು ಸಿದ್ಧವಿದ್ದೇವೆ, ಯಾವುದೇ ಅಂಜಿಕೆ ಇಲ್ಲ. ಅವರಿಂದ ಒಕ್ಕೂಟಕ್ಕೆ ಆಗುವ ಸಹಕಾರವನ್ನು ಪಡೆದುಕೊಳ್ಳಲು ನಾವು ಸಿದ್ದರಿದ್ದೆವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.