ADVERTISEMENT

ಕೋವಿಡ್ ಭಯ: ನೆರವಿಗೆ ಬಾರದ ಸಂಬಂಧಿಕರು; ನರಳಾಡಿ ರಸ್ತೆಯಲ್ಲೇ ಪ್ರಾಣಬಿಟ್ಟ ಮಹಿಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 21:43 IST
Last Updated 29 ಏಪ್ರಿಲ್ 2021, 21:43 IST
ಮಹಿಳೆಯೊಬ್ಬರ ಶವ ಗ್ರಾಮದ ನಡುರಸ್ತೆಯಲ್ಲೇ ಅನಾಥವಾಗಿ ಬಿದ್ದಿತ್ತು
ಮಹಿಳೆಯೊಬ್ಬರ ಶವ ಗ್ರಾಮದ ನಡುರಸ್ತೆಯಲ್ಲೇ ಅನಾಥವಾಗಿ ಬಿದ್ದಿತ್ತು   

ಮುಳಬಾಗಿಲು: ಕೋವಿಡ್‌ ಭೀತಿಯಿಂದ ಸಂಬಂಧಿಕರು ಸೇರಿ ಯಾರೊಬ್ಬರೂ ನೆರವಿಗೆ ಬಾರದೆ, ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ನಡು ರಸ್ತೆಯಲ್ಲಿಯೇ ನರಳಿ ಪ್ರಾಣ ಬಿಟ್ಟ ಘಟನೆ ಗುರುವಾರ ತಾಲ್ಲೂಕಿನ ಸಂಗಂಡ್ಲಹಳ್ಳಿಯಲ್ಲಿ ನಡೆದಿದೆ.

ಶವದ ಬಳಿ ತೆರಳಲು ಗ್ರಾಮಸ್ಥರು ಹಿಂಜರಿದ ಕಾರಣ ಹಲವು ಗಂಟೆಗಳು ಶವ ನಡುರಸ್ತೆಯಲ್ಲಿಯೇಅನಾಥವಾಗಿ ಬಿದ್ದಿತ್ತು. ಕೊನೆಗೆ ತಾಲ್ಲೂಕು ಆಡಳಿತದವರು ಅಂತ್ಯಕ್ರಿಯೆ ನಡೆಸಿದರು.

ಜ್ವರ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆ ನೆರವು ಕೋರಿ ಬೆಳಿಗ್ಗೆಯೇ ರಸ್ತೆಗೆ ಬಂದು ಕುಸಿದು ಬಿದ್ದಿದ್ದಾಳೆ. ಮದ್ಯ ವ್ಯಸನಿ ಪತಿ ಹಾಗೂ ಬಂಧುಗಳು ಸೇರಿ ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ. ಮಹಿಳೆಗೆ ಕೊರೊನಾ ಸೋಂಕು ತಗುಲಿರಬಹುದು ಎಂಬ ಭೀತಿಯಿಂದ ದೂರದಿಂದಲೇ ಮಹಿಳೆಯ ನರಳಾಟ ನೋಡುತ್ತ ನಿಂತಿದ್ದರು.

ADVERTISEMENT

ಹೆಚ್ಚಿನವರು ಮಹಿಳೆಯ ನರಳಾಟ ಮತ್ತು ಸಾವಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವಲ್ಲಿ ನಿರತರಾಗಿದ್ದರೇ ಹೊರತು ಅಂಗಲಾಚಿ ಬೇಡಿಕೊಂಡರೂ ಯಾರೊಬ್ಬರೂ ಆಕೆಯ ನೆರವಿಗೆ ಧಾವಿಸಿರಲಿಲ್ಲ.

ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಶವ ಸಾಗಿಸಲು ಗ್ರಾಮಸ್ಥರ ನೆರವು ಕೇಳಿದ್ದಾರೆ. ಆಗಲೂ ಯಾರು ಮುಂದೆ ಬಂದಿಲ್ಲ. ಪಂಚಾಯಿತಿ ಸಿಬ್ಬಂದಿ ಮತ್ತು ಪೊಲೀಸರ ನೆರವಿನಿಂದ ಟ್ರ್ಯಾಕ್ಟರ್‌ನಲ್ಲಿ ಹೆಣ ಸಾಗಿಸಿ, ಅಂತ್ಯಕ್ರಿಯೆ ನಡೆಸಿದರು. ಮೃತಳಿಗೆ ಕೊರೊನಾ ಸೋಂಕು ತಗುಲಿದ್ದ ಕುರಿತು ಖಚಿತ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.