ಬಂಗಾರಪೇಟೆ: ಹಿಂದುಳಿದ ಗ್ರಾಮ ಪಂಚಾಯಿತಿ ಎಂಬ ಹಣೆಪಟ್ಟಿಗೆ ದೋಣಿಮಡಗು ಸೇರಿದೆ. ಇಲ್ಲಿನ ಸಂಪರ್ಕ ರಸ್ತೆಗಳು ಹದಗೆಟ್ಟಿವೆ. ಮೂಲ ಸೌಕರ್ಯಗಳಿಂದ ವಂಚಿತ ಜನರು ಸುಗಮ ಸಂಚಾರವಿಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹದಗೆಟ್ಟ ಗ್ರಾಮೀಣ ರಸ್ತೆಗಳು: ತಾಲ್ಲೂಕಿನ ಗಡಿ ಭಾಗದ ಮಲ್ಲೇಶ್ ಪಾಳ್ಯ, ಸಾಕರಸನಹಳ್ಳಿ, ಕದರಿನತ್ತ, ಕುಂದರಸನಹಳ್ಳಿ, ಪೋಲೇನಹಳ್ಳಿ, ತಳೂರು, ಬತ್ತಲಹಳ್ಳಿ ಆನೆಗಳ ಕಾಟ ಒಂದು ಕಡೆಯಾದರೆ ತೋಟಗಳಿಗೆ ಸಂಚರಿಸಲು ಸೂಕ್ತ ರಸ್ತೆಗಳು ಇಲ್ಲದೆ ಪರದಾಡುವ ಸ್ಥಿತಿ ಇದೆ.
ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಮುಖ್ಯ ರಸ್ತೆ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲು ರಸ್ತೆಯಲ್ಲಿ ಗುಂಡಿ ಬಿದ್ದಿವೆ.
ಈ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಈ ರಸ್ತೆಯಲ್ಲಿ ಹೊಲ–ಗದ್ದೆಗಳಿಗೆ ತೆರಳುವ ಸಮಯದಲ್ಲಿ ಆನೆ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ನರೇಗಾ ಯೋಜನೆಯಡಿ ರೈತರ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅತಿ ಜರೂರಾಗಿ ರಸ್ತೆಯನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲ.– ಬಸಪ್ಪ, ರೈತ ಸಾಕರಸನಹಳ್ಳಿ
ಸಾಕರಸನಹಳ್ಳಿ ಗ್ರಾಮದಿಂದ ಕದಿರಿನತ್ತ ಗ್ರಾಮದ ಮುಖ್ಯ ರಸ್ತೆಗೆ ಡಾಂಬರೀಕರಣ ಮಾಡಿ ಬಸ್ ಸಂಚರಿಸಿದರೆ ಅನುಕೂಲವಾಗುತ್ತದೆ.– ಎಸ್.ಕೆ ವೆಂಕಟಸ್ವಾಮಿ, ರೈತ ಸಾಕರಸನಹಳ್ಳಿ
ಗಡಿ ಭಾಗದಲ್ಲಿರುವ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಮಾಡುವುದರಿಂದ ರೈತರಿಗೆ ಕೃಷಿ ಮಾಡಲುತರಕಾರಿ ಮಾರುಕಟ್ಟೆಗೆ ಸಾಗಿಸಲು ಸಹಕಾರಿ.– ಶಿವಕುಮಾರ್ .ಎಸ್, ಹೈನುಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.