ADVERTISEMENT

4 ಕೆರೆ ಪುನಶ್ಚೇತನಕ್ಕೆ ಚಾಲನೆ

ಕಾಮಗಾರಿಗೆ ಟೆಕ್ಸಾಸ್ ಕಂಪನಿಯ ಆರ್ಥಿಕ ನೆರವು: ₹ 20 ಲಕ್ಷ ಅಂದಾಜು ವೆಚ್ಚ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 14:07 IST
Last Updated 12 ಜುಲೈ 2019, 14:07 IST
ಕೋಲಾರ ತಾಲ್ಲೂಕಿನ ಬೆಟ್ಟ ಬೆಣಜೇನಹಳ್ಳಿಯ ಕೆರೆ ಪುನಶ್ಚೇತನ ಕಾಮಗಾರಿಗೆ ಧಾನ್ ಪ್ರತಿಷ್ಠಾನದ ಸಂಯೋಜಕ ರಮೇಶ್ ಶುಕ್ರವಾರ ಚಾಲನೆ ನೀಡಿದರು.
ಕೋಲಾರ ತಾಲ್ಲೂಕಿನ ಬೆಟ್ಟ ಬೆಣಜೇನಹಳ್ಳಿಯ ಕೆರೆ ಪುನಶ್ಚೇತನ ಕಾಮಗಾರಿಗೆ ಧಾನ್ ಪ್ರತಿಷ್ಠಾನದ ಸಂಯೋಜಕ ರಮೇಶ್ ಶುಕ್ರವಾರ ಚಾಲನೆ ನೀಡಿದರು.   

ಕೋಲಾರ: ‘ಟೆಕ್ಸಾಸ್ ಕಂಪನಿಯ ಆರ್ಥಿಕ ನೆರವು ಮತ್ತು ರೈತರ ಸಹಭಾಗಿತ್ವದಲ್ಲಿ ತಾಲ್ಲೂಕಿನ 4 ಕೆರೆಗಳ ಪುನಶ್ಚೇತನ ಮಾಡುತ್ತಿದ್ದು, ಜನ ಸಹಕಾರ ನೀಡಬೇಕು’ ಎಂದು ಧಾನ್ ಪ್ರತಿಷ್ಠಾನದ ಸಂಯೋಜಕ ರಮೇಶ್ ಮನವಿ ಮಾಡಿದರು.

ಧಾನ್ ಪ್ರತಿಷ್ಠಾನವು ಕೈಗೊಂಡಿರುವ ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟ ಬೆಣಜೇನಹಳ್ಳಿ ಕೆರೆ ಪುನಶ್ಚೇತನ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ‘ತಾಲ್ಲೂಕಿನ ಶೆಟ್ಟಿಕೊತ್ತನೂರು, ಚಿಕ್ಕನಹಳ್ಳಿ, ಗುಟ್ಟಹಳ್ಳಿ ಹಾಗೂ ಬೆಟ್ಟ ಬೆಣಜೇನಹಳ್ಳಿ ಕೆರೆಗಳನ್ನು ₹ 20 ಲಕ್ಷ ವೆಚ್ಚದಲ್ಲಿ ಪುನಶ್ಚೇತನ ಮಾಡಲಾಗುತ್ತದೆ’ ಎಂದರು.

‘ನಮ್ಮೂರ ಕೆರೆ ನಮ್ಮೂರ ಜೀವ ಜಲದ ಜೀವನಾಡಿ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕು. ಕೆರೆ ಉಳಿದರೆ ಮಾತ್ರ ಗ್ರಾಮದಲ್ಲಿ ಅಂತರ್ಜಲ ವೃದ್ಧಿ ಸಾಧ್ಯ ಎಂಬುದನ್ನು ಅರಿತು ಕೆರೆ ಪುನಶ್ಚೇತನ ಕಾಮಗಾರಿಗೆ ಸಹಕಾರ ನೀಡಿ’ ಎಂದು ಹೇಳಿದರು.

ADVERTISEMENT

‘ಕೆರೆ ಪುನಶ್ಚೇತನದ ಜತೆಗೆ ಕೆರೆ ಅಂಗಳದಲ್ಲಿ ಜಾನುವಾರುಗಳಿಗೆ ಹಾಗೂ ಪ್ರಾಣಿಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಾಣ ಮಾಡುತ್ತೇವೆ. ಟೆಕ್ಸಾಸ್ ಕಂಪನಿ ನೀಡುವ ಅನುದಾನವನ್ನು ನೀರು ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಬಳಸುತ್ತೇವೆ. ಕೆರೆಗಳಲ್ಲಿ ಹೂಳು ತೆಗೆಯುತ್ತೇವೆ. ರೈತರು ಕೆರೆ ಹೂಳನ್ನು ತಮ್ಮ ತೋಟಗಳಿಗೆ ಸಾಗಿಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ’ ಎಂದು ಸಲಹೆ ನೀಡಿದರು.

‘ಕೆರೆ ಕಟ್ಟೆ ಬಲವರ್ಧನೆ, ಪೋಷಕ ಕಾಲುವೆಗಳ ದುರಸ್ತಿ, ಕಳೆ ಗಿಡ ತೆಗೆಯುವುದು, ಹೂಳು ಹೊರ ಸಾಗಿಸುವುದು, ಗ್ರಾಮದ ದನ ಕರುಗಳಿಗೆ ನೀರಿನ ತೊಟ್ಟಿ ನಿರ್ಮಿಸುವುದು, ಗ್ರಾಮದ ಕುಂಟೆಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ರೈತರ ಸಹಭಾಗಿತ್ವದಲ್ಲಿ ಮಾಡುತ್ತೇವೆ’ ಎಂದು ವಿವರಿಸಿದರು.

ಅಂತರ್ಜಲ ವೃದ್ಧಿ: ‘ಕೆರೆಗಳ ಪುನಶ್ಚೇತನವಾದರೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ನೀರು ನಿಂತರೆ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದು ವಕ್ಕಲೇರಿ ಗ್ರಾ.ಪಂ ಸದಸ್ಯ ಇಲಿಯಾಜ್ ಖಾನ್ ಅಭಿಪ್ರಾಯಪಟ್ಟರು.

‘ಧಾನ್‌ ಪ್ರತಿಷ್ಠಾನವು ಗ್ರಾ.ಪಂ ವ್ಯಾಪ್ತಿಯಲ್ಲಿ ಉತ್ತಮ ಸಾಮಾಜಿಕ ಕಾಳಜಿಯ ಕೆಲಸ ಮಾಡುತ್ತಿದೆ. ಪ್ರತಿಷ್ಠಾನಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎಂದು ವಕ್ಕಲೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಜಾಜ್ ಪಾಷಾ ಭರವಸೆ ನೀಡಿದರು.

‘ಪೂರ್ವಿಕರು ದೂರದೃಷ್ಟಿಯಿಂದ ನಿರ್ಮಿಸಿರುವ ಕೆರೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದು. ಕೆರೆಗಳ ಒತ್ತುವರಿ, ಫಿಲ್ಟರ್ ಮರಳು ದಂಧೆಗೆ ಅವಕಾಶ ನೀಡುವುದಿಲ್ಲ’ ಎಂದರು.

ಗ್ರಾ.ಪಂ ಕಾರ್ಯದರ್ಶಿ ಸೀತಾರಾಮಪ್ಪ, ಲೆಕ್ಕ ಸಹಾಯಕ ವೆಂಕಟೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.