ADVERTISEMENT

ಕೋಲಾರ | ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು!

ಕಾರ್ಮಿಕರಿಗೆ, ಸ್ಥಳೀಯರಿಗೆ ಮಾದಕ ವಸ್ತು ಮಾರಾಟ– ಹೊರರಾಜ್ಯದ ಕೆಲ ಕಾರ್ಮಿಕರ ಕೃತ್ಯ

ಕೆ.ಓಂಕಾರ ಮೂರ್ತಿ
Published 22 ಸೆಪ್ಟೆಂಬರ್ 2025, 5:48 IST
Last Updated 22 ಸೆಪ್ಟೆಂಬರ್ 2025, 5:48 IST
ಆರೋಪಿಗಳಿಂದ ವಶಕ್ಕೆ ಪಡೆದಿರುವ ಗಾಂಜಾ ಪೊಟ್ಟಣ
ಆರೋಪಿಗಳಿಂದ ವಶಕ್ಕೆ ಪಡೆದಿರುವ ಗಾಂಜಾ ಪೊಟ್ಟಣ   

ಕೋಲಾರ: ಕೋಲಾರದಲ್ಲಿ ಅದರಲ್ಲೂ ನರಸಾಪುರ, ವೇಮಗಲ್‌ ಹಾಗೂ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ಘಾಟು ಹೆಚ್ಚುತ್ತಿದೆ. 

ಹೊರರಾಜ್ಯಗಳಿಂದ ಪ್ರಮುಖವಾಗಿ ಉತ್ತರ ಭಾರತದಿಂದ ಬಂದು ಈ ಪ್ರದೇಶದ ಕಾರ್ಖಾನೆ, ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. 

ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ಬಾಡಿಗೆ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ಸಿಬ್ಬಂದಿ ಸೆ.19ರಂದು ರಾತ್ರಿ ನಡೆಸಿದ ದಾಳಿಯಲ್ಲಿ ಒಡಿಶಾದ ಇಬ್ಬರು ಕಾರ್ಮಿಕರು ಗಾಂಜಾ ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಈ ಕಾರ್ಮಿಕರು ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಾರಾಟಕ್ಕೆಂದು ಗಾಂಜಾವನ್ನು ಸಣ್ಣಸಣ್ಣ ಪೊಟ್ಟಣಗಳಲ್ಲಿ ತುಂಬಿಟ್ಟುಕೊಂಡಿದ್ದರು. 

ADVERTISEMENT

ಮೂರು ದಿನಗಳ ಹಿಂದೆ ಕೋಲಾರ ನಗರದ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದ ಬಾಲಾಜಿ ರೈಸ್ ಮಿಲ್ ಮುಂಭಾಗ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹರಿಯಾಣ ಹಾಗೂ ರಾಜಸ್ಥಾನದ ಎಂಟು ಮಂದಿಯನ್ನು ವಿಶೇಷ ಪೊಲೀಸ್‌ ತಂಡ ಬಂಧಿಸಿತ್ತು. ಈ ಖದೀಮರು ಆಯಾಯ ರಾಜ್ಯಕ್ಕೆ ಹೋದಾಗ ವಾಹನದ ನಂಬರ್‌ ಪ್ಲೇಟ್‌ ಬದಲಾಯಿಸುತ್ತಿದ್ದರು. ಕೋಲಾರ ಗ್ರಾಮಾಂತರ ಪೊಲೀಸರು ಆಂಧ್ರದ ಮದನಪಲ್ಲಿಯ ವ್ಯಕ್ತಿಯೊಬ್ಬನನ್ನು ಬಂಧಿಸಿ 3 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಮೂರು ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 31 ಕೆ.ಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಾಗಣೆ, ಮಾರಾಟ, ಬಳಕೆ ಪ್ರಕರಣ ಗಮನಿಸಿದರೆ ಕೆಲ ತಿಂಗಳಿಂದ ಕಡಿಮೆ ಆಗಿದ್ದ ಡ್ರಗ್ಸ್‌ ಮಾಫಿಯಾ ಜಾಲ ಜಿಲ್ಲೆಯಲ್ಲಿ ಮತ್ತೆ ತಲೆ ಎತ್ತಿರುವಂತಿದೆ.

ಮಾದಕ ವಸ್ತು ಹಾಗೂ ಅಮಲು ಪದಾರ್ಥಗಳ ನಿಯಂತ್ರಣಾ ಕಾಯ್ದೆ (ಎನ್‌ಡಿಪಿಎಸ್‌) ಅಡಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 137 ಪ್ರಕರಣ ದಾಖಲಾಗಿವೆ. 202 ಆರೋಪಿಗಳನ್ನು ಬಂಧಿಸಲಾಗಿದೆ. ₹ 2.35 ಕೋಟಿ ಮೌಲ್ಯದ 260 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. 2025ರಲ್ಲಿ ಜುಲೈ ವರೆಗೆ 35 ಪ್ರಕರಣ ದಾಖಲಾಗಿದ್ದು 51 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಗಾಂಜಾ ಸಂಬಂಧಿ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿವೆ. ಕಳೆದ ಆಗಸ್ಟ್‌ ಹಾಗೂ ಈ ತಿಂಗಳಲ್ಲಿ ಮತ್ತಷ್ಟು ಪ್ರಕರಣ ಸೇರ್ಪಡೆಯಾಗಿವೆ.

ವಿವಿಧ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ಕೂಡ ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದಾರೆ.

ನರಸಾಪುರ ಹಾಗೂ ಕೋಲಾರದ ಸುತ್ತಮುತ್ತ ಹಲವೆಡೆ ಹೊರರಾಜ್ಯದ ಕಾರ್ಮಿಕರು ಮನೆಗಳನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದಾರೆ. ಹಲವರು ಪೇಯಿಂಗ್‌ ಗೆಸ್ಟ್‌ಗಳಲ್ಲಿ (ಪಿ.ಜಿ) ಇದ್ದಾರೆ. ಆದರೆ, ಸ್ಥಳೀಯರು ಹಿಂದೆಮುಂದೆ ನೋಡದೆ, ಸರಿಯಾಗಿ ವಿಚಾರಿಸದೆ ಬಾಡಿಗೆ ಮನೆ ನೀಡುತ್ತಿದ್ದಾರೆ. ನಂತರವೂ ಏನು ಚಟುವಟಿಕೆ ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿಲ್ಲ. ಹೀಗಾಗಿ, ಪೊಲೀಸರು ಹಾಗೂ ಮನೆ ಮಾಲೀಕರು ಗಮನ ಇಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಮಾದಕ ವಸ್ತು ಮುಕ್ತ ಜಿಲ್ಲೆ’ಯನ್ನಾಗಿಸಬೇಕೆಂಬ ಪಣ ತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮತ್ತಷ್ಟು ಕಠಿಣ ಕ್ರಮ ಕೈಗೊಂಡು, ಡ್ರಗ್ಸ್‌ ಮಾಫಿಯಾ ಮಟ್ಟಹಾಕಬೇಕು ಎಂದು ಆಗ್ರಹಿಸಿದ್ದಾರೆ.

ನಿಖಿಲ್‌ ಬಿ.

ಜಿಲ್ಲೆಯಲ್ಲಿ ಡ್ರಗ್ಸ್‌ ಮಾಫಿಯಾ ಜಾಲ ಮತ್ತೆ ಚುರುಕು? ಮೂರು ದಿನಗಳಲ್ಲಿ 31 ಕೆ.ಜಿಗೂ ಅಧಿಕ ಗಾಂಜಾ ವಶ ಹೊರರಾಜ್ಯಗಳ ಒಟ್ಟು 11 ಮಂದಿ ಆರೋಪಿಗಳ ಬಂಧನ

ಗಾಂಜಾ ಮಾರಾಟ ಹೇಗೆ ಗೊತ್ತೇ?
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಂದ ಖಾಸಗಿ ಟ್ರಾವೆಲ್ಸ್‌ಗಳ ಮೂಲಕ ಗಾಂಜಾ ಪಾರ್ಸೆಲ್‌ ತರಿಸಿಕೊಳ್ಳುತ್ತಾರೆ. ಫೋನ್‌ ಪೇ ಮೂಲಕ ಹಣ ಪಾವತಿಸುತ್ತಾರೆ. ಫ್ಲಿಪ್‌ಕಾರ್ಟ್‌ ಅಮೆಜಾನ್‌ನಲ್ಲಿ ಬರುವ ಪೊಟ್ಟಣಗಳ ಮಾದರಿಯಲ್ಲಿ ಆ ಪೊಟ್ಟಣ ಇರುತ್ತದೆ. ಹೀಗಾಗಿ ಯಾರಿಗೂ ಅನುಮಾನ ಬರುವುದಿಲ್ಲ. ಉತ್ತರ ಭಾರತದ ಕಾರ್ಮಿಕರು ನರಸಾಪುರ ಕೋಲಾರ ಸುತ್ತಮುತ್ತ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಗಾಂಜಾ ತುಂಬಿ ಬೂಂದಿ ಪಾಕೆಟ್‌ ರೀತಿ ಮಾಡುತ್ತಾರೆ. ನಂತರ ಮಾರಾಟ ಮಾಡುತ್ತಾರೆ. ಕಾರ್ಮಿಕರು ಕಾರ್ಖಾನೆ ಕಂಪನಿಗಳಿಂದ ಬಿಡುವಿನ ಅವಧಿ ಅಥವಾ ಕೆಲಸ ಮುಗಿದ ಮೇಲೆ ಚಹಾ ಕಾಫಿ ಕುಡಿಯಲು ಸುತ್ತಮುತ್ತಲಿನ ಚಹಾದಂಗಡಿ ಬೀಡಾ ಅಂಗಡಿ ಇನ್ನಿತರ ಸಣ್ಣಪುಟ್ಟ ಅಂಗಡಿಗಳಿಗೆ ಬರುತ್ತಾರೆ. ಆಗ ಅಲ್ಲಿ ಗಾಂಜಾ ತುಂಬಿರುವ 10 ಗ್ರಾಂ ಪೊಟ್ಟಣಗಳನ್ನು ₹ 500ಕ್ಕೆ ಒಂದರಂತೆ ಮಾರುತ್ತಾರೆ. ಅಬಕಾರಿ ಇಲಾಖೆ ಸಿಬ್ಬಂದಿಗೆ ಈಚೆಗೆ ಈ ಪ್ರದೇಶದ ಬಾಡಿಗೆ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅಂಥ 192 ಪೊಟ್ಟಣ ಪತ್ತೆಯಾಗಿವೆ. ಅಲ್ಲದೆ ಒಡಿಶಾದ ಆರೋಪಿಯೊಬ್ಬ ಹೇಗೆಲ್ಲಾ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಬೀಡಾ ಅಥವಾ ಸಣ್ಣಪುಟ್ಟ ಅಂಗಡಿಗಳಲ್ಲಿ ಚಾಕೊಲೇಟ್‌ ರೂಪದಲ್ಲಿ ಮಾರಾಟ ಮಾಡಿದ್ದ ಪ್ರಕರಣ ನರಸಾಪುರದಲ್ಲಿ ವರ್ಷಗಳ ಹಿಂದೆ ಪತ್ತೆಯಾಗಿತ್ತು. ಕೈಗಾರಿಕಾ ಪ್ರದೇಶದ ಕಾರ್ಮಿಕರು ಸ್ಥಳೀಯರು ಕಾಲೇಜುಗಳ ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌.
ಸಾಗಾಟ ಮಾರಾಟ ಬಳಕೆದಾರರ ಮೇಲೆ ನಿಗಾ
ಮೊದಲು ಮಾದಕ ವಸ್ತುಗಳ ಸಾಗಾಟ ತಡೆಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಗಡಿಭಾಗವಾಗಿರುವ ಕಾರಣ ಹೆಚ್ಚು ನಿಗಾ ಇಟ್ಟಿದ್ದೇವೆ. ಕೆಲ ದಿನಗಳ ಹಿಂದೆ ನಮ್ಮ ಪೊಲೀಸರು ಹರಿಯಾಣ ರಾಜಸ್ಥಾನದ ಎಂಟು ಮಂದಿಯನ್ನು ಆಂಧ್ರದ ಮದನಪಲ್ಲಿಯ ವ್ಯಕ್ತಿಯನ್ನು ಬಂಧಿಸಿದೆ. ಮಾರಾಟಗಾರರನ್ನು ಪತ್ತೆ ಹಚ್ಚುವುದಲ್ಲದೇ ಮಾದಕ ವಸ್ತು ಖರೀದಿಸಿ ಬಳಕೆ ಮಾಡುವವರ ಮೇಲೂ ನಿಗಾ ಇಡಲಾಗಿದೆ. ಈಚೆಗೆ ವೇಮಗಲ್‌ ಮಾಲೂರಿನಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಕೈಗಾರಿಕಾ ಪ್ರದೇಶದ ಮೇಲೂ ನಿಗಾ ಇಟ್ಟಿದ್ದೇವೆ. ಮತ್ತಷ್ಟು ಶೋಧ ಕಾರ್ಯ ನಡೆಸುತ್ತೇವೆ ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Cut-off box - ಕೋತಿ ತಾನು ಕೆಡದೆ ಇಡೀ ವನ ಕೆಡಿಸಿತು! ನರಸಾಪುರ ಕೈಗಾರಿಕಾ ಪ್ರದೇಶದ ವಿವಿಧ ಕಂಪನಿ ಕಾರ್ಖಾನೆಗಳಲ್ಲಿ ಹೊರರಾಜ್ಯದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹರಿಯಾಣ ರಾಜ್ಯಸ್ಥಾನ ಬಿಹಾರ ಉತ್ತರ ಪ್ರದೇಶ ಮಧ್ಯ ಪ್ರದೇಶ ಒಡಿಶಾ ಪಶ್ಚಿಮ ಬಂಗಾಳ ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಂದ ಬಂದು ಸ್ಟೋರ್‌ ಕೀಪಿಂಗ್‌ ಸ್ವಚ್ಛತೆ ಸೆಕ್ಯೂರಿಟಿ ಸೇರಿದಂತೆ ವಿವಿಧ ಸ್ವರೂಪದ ಕೆಲಸದಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲ ಕಾರ್ಮಿಕರು ಹಣದ ದುರಾಸೆಗೆ ತಮ್ಮ ರಾಜ್ಯದಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡಿ ತಾವು ಕೆಡುವುದಲ್ಲದೆ ಸ್ಥಳೀಯರನ್ನೂ ಕೆಡಿಸುತ್ತಿದ್ದಾರೆ. ಕೋತಿ ತಾನು ಕೆಡದೆ ಇಡೀ ವನ ಕೆಡಿಸಿತು ಎಂಬ ಮಾತಿನಂತಾಗಿದೆ.

ಈಚೆಗೆ ಹೊರರಾಜ್ಯದ ಕಾರ್ಮಿಕನ ಕೊಲೆ!
ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಕಾರ್ಮಿಕ ಅರ್ನಾಬ್‌ ಮನ್ನಾ (25) ಎಂಬುವರನ್ನು ಈಚೆಗೆ ಮಾಲೂರು ತಾಲ್ಲೂಕಿನ ಮುತ್ತಕದಹಳ್ಳಿ ಬಳಿ ಕೊಲೆ ಮಾಡಲಾಗಿತ್ತು. ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುವಾಗ ಈ ಕೃತ್ಯ ನಡೆದಿತ್ತು. ಕೊಲೆಗೆ ಕಾರಣ ಪತ್ತೆ ಹೆಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.