ಕೆಜಿಎಫ್: ‘ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆ ಮತ್ತು ಮಾನವೀಯತೆ ಬೆಳೆಸಬೇಕು’ ಎಂದು ರಂಗ ಶಿಕ್ಷಕ ಜೀವನರಾಂ ಸುಳ್ಯ ರಂಗಮನೆ ಹೇಳಿದರು.
ಬೆಮಲ್ನ ಕರಾವಳಿ ಸಾಂಸ್ಕೃತಿಕ ಸಂಘದ 50ನೇ ವರ್ಷದ ಸಂಭ್ರಮ ಆಚರಣೆ ನಿಮಿತ್ತ ಶುಕ್ರವಾರ ನಡೆದ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಮತ್ತು ಸಮಾಜದ ನಡುವೆ ಬಾಂಧವ್ಯ ಇದೆ. ಅದನ್ನು ಸಮಾಜದ ಏಳಿಗೆಗೆ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕರಾವಳಿಯವರು ತಮ್ಮ ವಿಶಿಷ್ಟ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಎಲ್ಲೆಡೆ ಎದ್ದು ಕಾಣುತ್ತಾರೆ. ಜಗತ್ತಿನ ಎಲ್ಲೇ ಹೋದರೂ ಅವರು ತಮ್ಮ ಛಾಯೆ ಉಳಿಸಿಕೊಳ್ಳುತ್ತಾರೆ ಎಂದು ಹೇಳಿದರು.
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಪ್ರಯತ್ನ ನಡೆದವು. ಆದರೆ, ನಮ್ಮ ಸಂಸದರು ಅಷ್ಟಾಗಿ ಉತ್ಸಾಹ ತೋರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಮಲ್ ಸಂಕೀರ್ಣದ ಮುಖ್ಯಸ್ಥ ವಿ. ಈಶ್ವರ ಭಟ್, ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ, ಕರಾವಳಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ನಾಗೇಶ್ ಪ್ರಭು, ನೆಹರು ಬಾಬು ಮಾತನಾಡಿದರು.
ಕರಾವಳಿಯಲ್ಲಿ ವಿಶೇಷ ಸಾಧನೆ ಮಾಡಿದ ರವಿ ಕಟಪಾಡಿ, ರಾಷ್ಟ್ರೀಯ ಮಹಿಳಾ ಸಾಧಕಿ ಸಬಿತಾ ಮೋನಿಸ್, ಎಚ್ಐವಿ ಪೀಡಿತ ಹೆಣ್ಣು ಮಕ್ಕಳ ಆರೈಕೆ ಕೇಂದ್ರದ ತಬಸ್ಸುಮ್,ವಿಶೇಷ ಸಾಧನೆ ಮಾಡಿದ ಅಚ್ಯುತ, ಕೆ. ಲಕ್ಷ್ಮಣಕುಮಾರ್, ಕೆ. ಗಂಗಾಧರ, ರಾಮಚಂದ್ರ ಮುಲ್ಕಿ, ಧರ್ಮೇಂದ್ರ ಆಚಾರ್ಯ, ಕೆ. ಶೀನಶೆಟ್ಟಿ, ಸಂಗೀತ, ಫ್ಲೋರಾ ಅಚ್ಯುತ, ಶಕೀಲಾ ಮುಲ್ಕಿ ಅವರನ್ನು ಅಭಿನಂದಿಸಲಾಯಿತು.
ಮಕ್ಕಳಿಂದ ಕದಂಬ ಕೌಶಿಕೆ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.