ADVERTISEMENT

ದಿನಸಿ ಚೀಲಗಳ ಮೇಲೆ ಕೆಜಿಎಫ್ ಶಾಸಕಿ ರೂಪಕಲಾ ಭಾವಚಿತ್ರ: ಅಧಿಕಾರಿಗಳ ದಾಳಿ

ಶ್ರೀನಾಥ್‌ ಎಂಬುವರಿಗೆ ಸೇರಿದ ತೋಟದ ಮನೆ ಮೇಲೆ ದಾಳಿ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 10:58 IST
Last Updated 10 ಮಾರ್ಚ್ 2023, 10:58 IST
   

ಕೋಲಾರ: ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸರು ಗುರುವಾರ ರಾತ್ರಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ತೋಟದ ಮನೆ ಮೇಲೆ ದಾಳಿ ನಡೆಸಿದ್ದು, ಕೆಜಿಎಫ್‌ ಶಾಸಕಿ ರೂಪಕಲಾ ಎಂ.ಶಶಿಧರ್‌ ಅವರ ಭಾವಚಿತ್ರಗಳಿದ್ದ ಸಾವಿರಾರು ಕೆ.ಜಿ ಅಕ್ಕಿ, ಬೇಳೆ, ಬೆಲ್ಲ, ಮೈದಾ ತುಂಬಿದ್ದ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮದ ಶ್ರೀನಾಥ್‌ ಎಂಬುವರಿಗೆ ಸೇರಿದ ತೋಟದ ಮನೆ ಇದಾಗಿದ್ದು, ಪ್ರತಿ ಚೀಲದಲ್ಲಿ 4 ಕೆ.ಜಿ ಅಕ್ಕಿ, 1 ಕೆ.ಜಿ ಬೆಲ್ಲ, 900 ಗ್ರಾಂ ತೊಗರಿಬೇಳೆ, 900 ಗ್ರಾಂ ಕಡಲೆಬೇಳೆ, 1 ಕೆ.ಜಿ ಮೈದಾ ಹಿಟ್ಟು ತುಂಬಿಡಲಾಗಿತ್ತು. ಇಂಥ 3,066 ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, 212 ಕ್ವಿಂಟಲ್‌ ತೊಗರಿಬೇಳೆ, 95.60 ಕ್ವಿಂಟಲ್‌ ಬೆಲ್ಲ, 151 ಕ್ವಿಂಟಲ್‌ ಮೈದಾ, 252 ಕ್ವಿಂಟಲ್‌ ಅಕ್ಕಿ ಚೀಲಗಳನ್ನು ಮನೆ, ಶೆಡ್‌ ಹಾಗೂ ಅಂಗಳದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು.

ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಬ್ಯಾಲಹಳ್ಳಿ ಗ್ರಾಮದ ಶ್ರೀನಾಥ್‌, ಕೆಜಿಎಫ್‌ ಶಾಸಕಿ ರೂಪಕಲಾ ಎಂ.ಶಶಿಧರ್‌ ಹಾಗೂ ದಾಸ್ತಾನು ಇರಿಸಿದ್ದ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ADVERTISEMENT

‘ಕೋಲಾರ ಜಿಲ್ಲಾಧಿಕಾರಿಗೆ ಬಂದ ಖಚಿತ ಮಾಹಿತಿ ಆಧರಿಸಿ ರಾತ್ರಿ 8.30ಕ್ಕೆ ದಾಳಿ ನಡೆಸಿದ್ದು, ಈ ಎಲ್ಲಾ ವಸ್ತುಗಳ ತೋಟದ ಮನೆಯಲ್ಲಿ ಸಿಕ್ಕಿವೆ. ಪ್ರಕರಣ ದಾಖಲಿಸಿದ್ದು, ತನಿಖೆ ವೇಳೆ ಸಂಬಂಧಪಟ್ಟವರು ದಾಖಲೆ ತೋರಿಸಬೇಕಾಗುತ್ತದೆ’ ಎಂದು ಜಿಲ್ಲೆಯ ಆಹಾರ ಇಲಾಖೆ ಉಪನಿರ್ದೇಶಕಿ ಶ್ರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಕೋಲಾರ ತಾಲ್ಲೂಕು ಗ್ರಾಮಾಂತರ ಪ್ರದೇಶದ ಆಹಾರ ನಿರೀಕ್ಷಕ ಗೋವಿಂದಪ್ಪ, ಗ್ರಾಮಾಂತರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜೆ.ಲೋಕೇಶ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.