ಚಿಕ್ಕಬಳ್ಳಾಪುರ: ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ನಮ್ಮತನ ನಾವು ಕಾಪಾಡಿಕೊಳ್ಳಬೇಕು. ಯಾರ ಬಗ್ಗೆಯೂ ಕೀಳರಿಮೆ ತರವಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ್ ಜಾನಕೀರಾಮ್ ಮಿಸ್ಕಿನ್ ಹೇಳಿದರು.
ನಗರದ ವಾಪಸಂದ್ರದಲ್ಲಿ ನಿಸರ್ಗ ಸೊಸೈಟಿ ಹಾಗೂ ಫೌಂಡೇಶನ್ ಫಾರ್ ಎಕೊಲಜಿಕಲ್ ಸೆಕ್ಯೂರಿಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಕೊರೊನಾದಿಂದ ಸಂಕಷ್ಟದಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಎಚ್ಐವಿ ಸೋಂಕಿತರಿಗೆ ದಿನಸಿ ಕಿಟ್ಗಳು, ಪೌಷ್ಟಿಕ ಆಹಾರ ವಿತರಣೆ ಹಾಗೂ ಉಚಿತ ವೈದ್ಯಕೀಯ ಪರೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾದಿಂದ ಸಾಕಷ್ಟು ಜನರ ಬದುಕನ್ನು ಕಷ್ಟಕ್ಕೆ ದೂಡಿದೆ. ಉಳ್ಳವರು ಮಾನವೀಯ ಮೌಲ್ಯವುಳ್ಳ ಸಂಸ್ಥೆಯ ಮೂಲಕ ದಿನಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ. ಆಹಾರದಷ್ಟೆ ಆರೋಗ್ಯವೂ ಮುಖ್ಯವಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ದಿಸೆಯಲ್ಲಿ ಆಗಾಗ್ಗೆ ವೈದ್ಯಕೀಯ ಸೌಲಭ್ಯ ಪಡೆಯಬೇಕು ಎಂದರು.
ನಿಸರ್ಗ ಸೊಸೈಟಿ ಮುಖ್ಯಸ್ಥ ವೆಂಕಟರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 300 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ನಿಸರ್ಗ ಸೊಸೈಟಿ ಕಾರ್ಯದರ್ಶಿ ಪಿ. ನಾರಾಯಣಸ್ವಾಮಿ, ಸಿಬ್ಬಂದಿ ಅಬ್ದುಲ್ ಇಬ್ರಾಹಿಂ, ವಿ. ವೇಣು, ಕೆ.ಜಿ. ಗಂಗಾಧರಪ್ಪ, ಜಿ.ವಿ. ಶ್ರೀನಿವಾಸ, ಚೌಡರೆಡ್ಡಿ, ಮೌಲಾ, ಪಲ್ಲವಿ, ವನಿತಾ, ಮಂಜುಳಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.