ಮಾಲೂರು: ‘ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಭಾನುವಾರ ತಾಲ್ಲೂಕಿನ ಮಾಸ್ತಿ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಸಾವಿರಾರು ನಿರಾಶ್ರಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಬಡ ಮಕ್ಕಳಿಗೆ ಉಚಿತ ಗುಣಮಟ್ಟ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನಿರೋದ್ಯೋಗ ಯುವಕ–ಯುವತಿಯರಿಗೆ ಕೌಶಲ ತರಬೇತಿ ನೀಡಿ ಸಾಲ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಪಂಚ ರತ್ನರಥ ಯಾತ್ರೆ ತೋರಲಕ್ಕಿ, ದಿನ್ನಹಳ್ಳಿ ಮಾರ್ಗವಾಗಿ ಮಾಸ್ತಿ ಗ್ರಾಮಕ್ಕೆ ಆಗಮಿಸಿತು. ರಸ್ತೆ ಬದಿಯ ಪ್ರತಿ ಗ್ರಾಮಗಳ ಜನತೆ ಪಂಚರತ್ನ ರಥಯಾತ್ರೆಗೆ ಬೆಂಬಲ
ವ್ಯಕ್ತಪಡಿಸಿದರು.
ಸಾರ್ವಜನಿಕ ಸಭೆಯ ನಂತರ ಕುಡಿಯನೂರು ತಾಳಕುಂಟೆ ಕೋಡಿಹಳ್ಳಿ ಗೇಟ್ ಸಂಪಂಗೆರೆ ಮಾರ್ಗವಾಗಿ ಚಿಕ್ಕ ತಿರುಪತಿಗೆ ತೆರಳಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ
ಲಕ್ಕೂರು ಮಾರ್ಗವಾಗಿ ಮಾಲೂರು ಪಟ್ಟಣಕ್ಕೆ ಯಾತ್ರೆ ಆಗಮಿಸಿತು. ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕೆಂಪೇಗೌಡ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಶಿವಾರ ಪಟ್ಟಣ ಗ್ರಾಮಕ್ಕೆ ರಾತ್ರಿ ಗ್ರಾಮ ವಾಸ್ತವ್ಯ ಹೂಡಿ ರೈತರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಜಿ.ಪಂ. ಮಾಜಿ ಸದಸ್ಯ ಜೆಡಿಎಸ್ ಮುಖಂಡ ಜಿ.ಇ. ರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಬೋಜೆಗೌಡ, ಮಾಜಿ ಎಂಎಲ್ಸಿ ಚೌಡರೆಡ್ಡಿ, ತಾಲ್ಲೂಕು ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯ ಎಚ್.ವಿ. ಚಂದ್ರಶೇಖರ್ ಗೌಡ, ಜಿ.ಪಂ ಮಾಜಿ ಸದಸ್ಯರಾದ ಎಚ್ ವಿ ಶ್ರೀನಿವಾಸ್, ರಾಮಸ್ವಾಮಿ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷೆ ತ್ರಿವರ್ಣ ರವಿ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆನಂದ್ ಕುಮಾರ್, ಜಯಣ್ಣ, ಟೇಕಲ್ ಸೋಮಣ್ಣ, ಟಿ.ಎನ್.ಸಂಪತ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.