
ಬಂಗಾರಪೇಟೆ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಕುರುಬರ ಸಂಘದಿಂದ ನಗರದ ಪುರಸಭೆ ಕಚೇರಿ ಆವರಣದಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ‘ಕುರಿ ಮುಖ ಲಕ್ಷ್ಮಿ ಸ್ವರೂಪ. ಕುರಿ ಕಂಬಳಿಯೇ ದೈವದ ಸ್ವರೂಪ’ ಎಂಬ ಕನಕದಾಸರ ವಾಣಿಯನ್ನು ಸ್ಮರಿಸಿದರು. ಕನಕದಾಸರು ಮತ್ತು ಬಸವೇಶ್ವರ ಸಮಾಜ ಸುಧಾರಣೆಗಾಗಿ ಶ್ರಮಿಸಿದರು. ಕುರುಬ ಸಮುದಾಯವು ಇತಿಹಾಸ ಸೃಷ್ಟಿಸಿದೆ ಮತ್ತು ಮುಂದಿನ ದಿನಗಳಲ್ಲಿ ಅಹಿಂದ ವರ್ಗವನ್ನು ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುತ್ತಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಿಕ್ಕ ವಲಗಮಾದಿ ಆರ್.ಮುನಿರಾಜು, ಕುರುಬ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಂಘಟಿತರಾಗಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಬೀರೇಶ್ ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ತೆಂಗಿನ ಕಾಯಿ ಪವಾಡ ನಾಟಕ ಮತ್ತು 150ಕ್ಕೂ ಹೆಚ್ಚು ಕನಕದಾಸರ ವಿಗ್ರಹಗಳನ್ನು ಹೊಂದಿರುವ ಮೆರವಣಿಗೆ ನಡೆಯಿತು. ಶಾಸಕರು ಮತ್ತು ಸಮುದಾಯ ಮುಖಂಡರು ನೃತ್ಯ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಗಾಯತ್ರಿ ಜಿ.ಎಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ ನಾಗರಾಜ್, ಪುರಸಭೆ ಅಧ್ಯಕ್ಷ ಗೋವಿಂದ, ನೌಕರರ ಸಂಘ ಅಧ್ಯಕ್ಷ ರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಅಪ್ಪಯ್ಯಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶಂಕರ್, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಗ್ರಾ.ಪಂ ಸದಸ್ಯರಾದ ಚೌಡಪ್ಪ, ಮಂಜುನಾಥ, ಗಾಜಗ ಪುರಸಭೆ ಸದಸ್ಯ ಯುವರಾಜ್, ಮಂಜುನಾಥ, ಅಂಬರೀಶ್, ಭಾಗ್ಯಮ್ಮ, ಸುಜಾತ, ಪದ್ಮಾವತಿ, ದೊಡ್ಡಣ್ಣ, ಚಲಪತಿ, ಅಶ್ವಥ್, ಎಸ್.ಕೆ ಜಯಣ್ಣ, ಶ್ರೀನಿವಾಸ್, ಹರೀಶ್, ಆನಂದ್, ವೆಂಕಟೇಶ್, ಕೆಇಬಿ ಬಾಬು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.