ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿ ಮುಚ್ಚಿ 25 ವರ್ಷ ಕಳೆದರೂ, ಇದುವರೆಗೆ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲವೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಸೇವ್ ಕೆಜಿಎಫ್ ಕಮಿಟಿ ವತಿಯಿಂದ ಭಾನುವಾರ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಿಸಲಾಯಿತು.
ಮಾರಿಕೊಪ್ಪಮ್ ಕಡೆಯಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ನಗರದ ಮೈನಿಂಗ್ ಪ್ರದೇಶಗಳಲ್ಲಿ ಸಂಚರಿಸಿ ಫೈವ್ಲೈಟ್ ವೃತ್ತದಲ್ಲಿರುವ ಕಾರ್ಮಿಕ ಮುಖಂಡರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ನಂತರ ಗಾಂಧಿ ಸರ್ಕಲ್ನಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಶಾಸಕ ಎಸ್.ರಾಜೇಂದ್ರನ್ ಮಾತನಾಡಿ, ಚಿನ್ನದ ಗಣಿ ಮುಚ್ಚಿ 25 ವರ್ಷ ಕಳೆದರೂ ಕಾರ್ಮಿಕರ ಯಾವುದೇ ಆಶ್ವಾಸನೆ ಈಡೇರಿಲ್ಲ. ಇದಕ್ಕೆ ಪ್ರಮುಖ ಕಾರಣ ನಾವು ಆಯ್ಕೆ ಮಾಡಿರುವ ಶಾಸಕರು, ಸಂಸದರು. ಈ ಹೋರಾಟವನ್ನು ನಾವು ಮಾಡುತ್ತಿರುವುದು ಮಾಜಿ ಕಾರ್ಮಿಕರಿಗೋಸ್ಕರ ಎಂದು ಹೇಳಿದರು
ನಮ್ಮ ಮಣ್ಣಿನ ಮಕ್ಕಳನ್ನು ಬಿಟ್ಟು ವಲಿಸಿಗರನ್ನು ಶಾಸಕರನ್ನಾಗಿ ಆಯ್ಕೆ ಮಾಡಿರುವುದರಿಂದ ಸಮಸ್ಯೆಗಳು ಇನ್ನೂ ಜಲ್ವಂತವಾಗಿವೆ ಎಂದರು.
ಕೆಜಿಎಫ್ ಸೇವ್ ಕಮಿಟಿ ಅಧ್ಯಕ್ಷ ಜ್ಯೋತಿಬಸು ಮಾತನಾಡಿ, ಬಿಜಿಎಂಎಲ್ ಕಾರ್ಮಿಕರ ಸಮಸ್ಯೆ ಇನ್ನು ಬಗೆಹರಿದಿಲ್ಲದಿರುವುದು ನಮ್ಮ ದುರಾದೃಷ್ಟ. ಇದಕ್ಕೆ ಜನಪ್ರತಿನಿಧಿಗಳೇ ಹೂಣೆ ಎಂದರು. ನಗರದಲ್ಲಿ ಉತ್ತಮ ಸಾರ್ವಜನಿಕ ಆಸ್ಪತ್ರೆ ಇಲ್ಲ. ಕಾರ್ಮಿಕರು ಅದೇ ಚಿಕ್ಕ ಮನೆಗಳಲ್ಲಿ ವಾಸವಾಗಿದ್ದಾರೆ. ಅವರು ಸ್ವತಂತ್ರವಾಗಿ ಬದುಕಲು ಆಗುತ್ತಿಲ್ಲ. ಗಣಿ ಕಾರ್ಮಿಕರ ಮಕ್ಕಳು ಪ್ರತಿನಿತ್ಯ ಓಡಾಟ ಮಾಡುತ್ತಾರೆ. ಅದರಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಈ ರೀತಿ ನಾನಾ ಸಮಸ್ಯೆಗಳು ನಮ್ಮ ತಾಲೂಕಿನಲ್ಲಿ ತಾಂಡವಾಡುತ್ತಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ದಯಾಳನ್ ಮಾತನಾಡಿ, ನಮ್ಮ ಮೈನಿಂಗ್ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಈಗಲೂ ಸಹ ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಒಳ್ಳೆಯ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಯಾವ ಕಾಲದಲ್ಲಿ ವಾಸ ಮಾಡುತ್ತಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.