
ಕೆಜಿಎಫ್: ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡುತ್ತಿರುವ ಅಂಬೇಡ್ಕರ್ ಭವನ ಮತ್ತು ಜ್ಞಾನ ಭಂಡಾರದ ನಿರ್ಮಾಣದ ವಿರುದ್ಧ ತಡೆಯಾಜ್ಞೆ ನೀಡಲು ಸ್ಥಳೀಯ ನ್ಯಾಯಾಲಯ ಗುರುವಾರ ನಿರಾಕರಿಸಿದೆ. ಗಾಲ್ಫ್ ಕ್ಲಬ್ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಜಿಎಂಎಲ್ ಗಾಲ್ಫ್ ಕ್ಲಬ್ ನ್ಯಾಯಾಲಯದ ಮೊರೆ ಹೋಗಿ ವಿವಾದ ಸೃಷ್ಟಿಗೆ ಕಾರಣವಾಗಿತ್ತು.
ಊರಿಗಾಂ ಬಳಿ ಈಚೆಗೆ ಸುಮಾರು ₹14ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಅವರು ನಗರಕ್ಕೆ ಕಾಲಿಟ್ಟ ನೆನೆಪಿನಲ್ಲಿ ಭವನ ಮತ್ತು ಜ್ಞಾನ ಭಂಡಾರ ನಿರ್ಮಾಣ ಮಾಡಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿತ್ತು. ಇದಕ್ಕಾಗಿ ಭಾನುವಾರದಂದು ಶಾಸಕಿ ಎಂ.ರೂಪಕಲಾ ಗುದ್ದಲಿ ಪೂಜೆ ನೆರವೇರಿಸಿದ್ದರು.
ಆದರೆ, ಭವನ ನಿರ್ಮಾಣ ಮಾಡುವ ಜಾಗದಲ್ಲಿ ಗಾಲ್ಫ್ ಕ್ಲಬ್ಗೆ ಸೇರಿದ ಜಾಗವನ್ನು ಕೂಡ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಕ್ಲಬ್ಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಗಾಲ್ಫ್ ಕ್ಲಬ್ ಪದಾಧಿಕಾರಿಗಳು ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕ್ಲಬ್ ಪರವಾಗಿ ವಾದ ಮಂಡಿಸಿದ ವಕೀಲ ಮುರಳಿ, ಗಾಲ್ಫ್ ಕ್ಲಬ್ ಇತಿಹಾಸವನ್ನು ನ್ಯಾಯಾಲಯದ ಮುಂದೆ ಬಿಟ್ಟಿಟ್ಟರು. ಬ್ರಿಟಿಷರು ಚಿನ್ನದ ಗಣಿಗಾರಿಕೆಗೆ ನಗರಕ್ಕೆ ಬಂದಾಗ 1885ರಲ್ಲಿ ಮನೊರಂಜನೆಯಾಗಿ ಗಾಲ್ಫ್ ಕ್ಲಬ್ ನಿರ್ಮಾಣ ಮಾಡಿದ್ದರು.
ಇಡೀ ದೇಶದಲ್ಲಿಯೇ ನಾಲ್ಕನೇ ಅತಿ ಹಳೆ ಕ್ಲಬ್ ಇದಾಗಿದೆ. ದೇಶದಲ್ಲಿ ಬ್ರೌನ್ ಗಾಲ್ಫ್ ಸೆಂಟರ್ ಇರುವುದು ನಗರದಲ್ಲಿ ಮಾತ್ರ. ಕರ್ನಾಟಕ ರಾಜ್ಯ ಬಿಜಿಎಂಎಲ್ಗೆ ಸೇರಿದ 12,109 ಎಕರೆ ಜಮೀನನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಜಿಎಂಎಲ್ ಗೆ ಹಸ್ತಾಂತರ ಮಾಡಿದಾಗ, ಜಮೀನಿಗೆ ₹78.82 ಕೋಟಿಗೆ ಖರೀದಿ ಮಾಡಲಾಗಿತ್ತು. ಇದಕ್ಕೆ ಸೇರಿದ ಗಾಲ್ಫ್ ಕ್ಲಬ್ ಪ್ರಸ್ತುತ 167 ಎಕರೆ ವ್ಯಾಪ್ತಿಯನ್ನು ಹೊಂದಿದೆ. ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಕಂದಾಯ ಅಧಿಕಾರಿಗಳು ತಾವೇ ದಾಖಲೆ ನಿರ್ಮಾಣ ಮಾಡಿಕೊಂಡು ಈಗ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ. ಬಿಜಿಎಂಎಲ್ 2001ರಲ್ಲಿ ಮುಚ್ಚಿದ ನಂತರ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಲಿಕ್ವಿಡೇಷನ್ ಹಂತದಲ್ಲಿ ಇದೆ. ನ್ಯಾಯಾಲಯದ ಅನುಮತಿಯಿಲ್ಲದೆ ಸರ್ಕಾರಿ ನೌಕರರು ಅನಧಿಕೃತ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಕೆಲ ರಾಜಕೀಯ ಪ್ರಭಾವಿಗಳು ಇದಕ್ಕೆ ಒತ್ತಾಸೆಯಾಗಿದ್ದಾರೆ. ರಾಜ್ಯ ಸರ್ಕಾರಿ ಬಿಜಿಎಂಎಲ್ ಜಾಗವನ್ನು ಸ್ವಾಧೀನ ಮಾಡಿಕೊಳ್ಳದೆ ಹೇಗೆ ದಾಖಲೆ ಮಾಡಲು ಸಾಧ್ಯ. ಆದ್ದರಿಂದ ಯಥಾಸ್ಥಿತಿ ಕಾಪಾಡುವುದಕ್ಕೆ ಆದೇಶ ಹೊರಡಿಸಬೇಕು ಎಂದು ಕೋರಿದರು.
ಅವರ ವಾದಕ್ಕೆ ಸಹಮತ ವ್ಯಕ್ತಪಡಿಸಿದ ಬಿಜಿಎಂಎಲ್ ಪರ ವಕೀಲ ಶ್ರೀನಾಥ್, ಯಥಾಸ್ಥಿತಿ ನೀಡುವುದಕ್ಕೆ ಬಿಜಿಎಂಎಲ್ ಅಭ್ಯಂತರ ಇಲ್ಲ ಎಂದು ತಿಳಿಸಿದರು.
ಭವನ ನಿರ್ಮಾಣ ಮಾಡುತ್ತಿರುವ ಜಾಗ ಬಿಜಿಎಂಎಲ್ಗೆ ಸೇರಿಲ್ಲ. ಎಂಟು ಎಕರೆ ರಾಜ್ಯ ಸರ್ಕಾರಕ್ಕೆ ಸೇರಿದ ಜಾಗದಲ್ಲಿ 14 ಕೋಟಿ ವೆಚ್ಚದಲ್ಲಿ ಯೋಜನೆ ಕಾಮಗಾರಿ ಶುರುವಾಗಿದೆ. ಯಥಾಸ್ಥಿತಿ ಆದೇಶ ನೀಡಿದರೆ ಯೋಜನೆಗೆ ತೊಂದರೆಯಾಗುತ್ತದೆ ಎಂದು ಸರ್ಕಾರಿ ವಕೀಲರಾದ ವೇಲಾಂಗಣಿ ವಾದ ಮಂಡಿಸಿದರು.
ಗಾಲ್ಫ್ ಕ್ಲಬ್ ವಕೀಲರ ವಾದಕ್ಕೆ ಮನ್ನಣೆ ನೀಡದ ನ್ಯಾಯಾಧೀಶೆ ಕೆ.ಶೆಮಿದ ಯಥಾಸ್ಥಿತಿ ಆದೇಶ ನೀಡಲು ನಿರಾಕರಿಸಿ, ಮುಂದಿನ ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಿದರು.