ADVERTISEMENT

ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಳ ಪರಿಶೀಲನೆ: ₹9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:52 IST
Last Updated 5 ನವೆಂಬರ್ 2025, 6:52 IST
ಕೆಜಿಎಫ್‌ ಊರಿಗಾಂನಲ್ಲಿ ಸಚಿವ ಬೋಸರಾಜು ವಿಜ್ಞಾನ ಕೇಂದ್ರದ ಸ್ಥಳ ಪರಿಶೀಲನೆಯನ್ನು ಮಂಗಳವಾರ ಮಾಡಿದರು. ಕಂದಾಯ ಅಧಿಕಾರಿಗಳು ಹಾಜರಿದ್ದರು.
ಕೆಜಿಎಫ್‌ ಊರಿಗಾಂನಲ್ಲಿ ಸಚಿವ ಬೋಸರಾಜು ವಿಜ್ಞಾನ ಕೇಂದ್ರದ ಸ್ಥಳ ಪರಿಶೀಲನೆಯನ್ನು ಮಂಗಳವಾರ ಮಾಡಿದರು. ಕಂದಾಯ ಅಧಿಕಾರಿಗಳು ಹಾಜರಿದ್ದರು.   

ಕೆಜಿಎಫ್‌: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ರಾಜ್ಯದಾದ್ಯಂತ ವಿಜ್ಞಾನ ಉಪ ಕೇಂದ್ರ ಮತ್ತು ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ಕೆಜಿಎಫ್‌ನಲ್ಲಿ ನಿರ್ಮಾಣವಾಗುವ ವಿಜ್ಞಾನ ಕೇಂದ್ರವನ್ನು ₹9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್‌.ಎಸ್‌. ಬೋಸರಾಜು ಹೇಳಿದರು.

ನಗರದ ಊರಿಗಾಂನಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣ ಮಾಡುವ ಸ್ಥಳವನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಮಾರ್ಚ್‌ ತಿಂಗಳೊಳಗೆ ಕಾಮಗಾರಿಯನ್ನು ಮುಗಿಸಲು ತೀರ್ಮಾನಿಸಲಾಗಿದೆ. ಕೆಜಿಎಫ್‌ ನಗರದಲ್ಲಿ ಕೇಂದ್ರದ ನಿರ್ಮಾಣಕ್ಕೆ ಹತ್ತು ಎಕರೆ ಜಮೀನನ್ನು ನೀಡಲಾಗಿದೆ. ಕೇಂದ್ರದ ಕಾಂಪೌಂಡ್ ಮತ್ತು ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹9 ಕೋಟಿ ವಿನಿಯೋಗಿಸಲಾಗುವುದು. ಮುಂದಿನ ದಿನಗಳಲ್ಲಿ ತಾರಾಲಯ ನಿರ್ಮಾಣ ಸೇರಿದಂತೆ ಹಂತ ಹಂತವಾಗಿ ಕೇಂದ್ರವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಚಿತ್ರದುರ್ಗದಲ್ಲಿ ಮತ್ತು ವಿಜಯನಗರದಲ್ಲಿ ಜಾಗ ಸಿಕ್ಕಿದೆ. ರಾಮನಗರದಲ್ಲಿ ಕೂಡ ಜಾಗ ನೋಡಲಾಗಿದೆ. ಎರಡು ವರ್ಷಗಳಿಂದ ಮೈಸೂರು, ಗದಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪನೆ ನೆನೆಗುದಿಗೆ ಬಿದ್ದಿತ್ತು. ಅದನ್ನು ಪೂರ್ಣಗೊಳಿಸಲಾಗುತ್ತಿದೆ. ರಾಯಚೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಜೂರಾಗಿದೆ. ಅದಕ್ಕೆ ಕೇಂದ್ರ ಸರ್ಕಾರದ ಅನುದಾನ ಮತ್ತು ಒಪ್ಪಿಗೆ ಸಿಕ್ಕಿದೆ. ಯೋಜನೆಗೆ ₹26 ಕೋಟಿಯನ್ನು  ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಶಂಕುಸ್ಥಾಪನೆ ಮಾಡಲಿದ್ದಾರೆ. ವಿಜ್ಞಾನ ಉಪಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನಾಗಿ ರೂಪಿಸುವ ಸಾಧ್ಯತೆ ಇದೆ ಎಂದರು.

ADVERTISEMENT

ಬೆಂಗಳೂರಿನ ಬಳಿ ವಿಜ್ಞಾನ ನಗರ ಮಾಡಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದೆ. ದೇವನಹಳ್ಳಿ ಬಳಿ ಕೆಐಎಡಿಬಿಯಿಂದ 20 ಎಕರೆ ಜಾಗ ಪಡೆಯಲಾಗಿದೆ. ₹300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಮಂಗಳೂರಿನ ಪಿಲಿಕುಳದಲ್ಲಿ ಕೂಡ ಅಭಿವೃದ್ಧಿ ನಡೆಯುತ್ತಿದೆ. ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ 11 ಮೊಬೈಲ್‌ ತಾರಾಲಯಗಳನ್ನು ತಯಾರು ಮಾಡಲಾಗಿದೆ. ಒಂದು ವಾರದಲ್ಲಿ ಮೊಬೈಲ್‌ ವಾಹನಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಕೆಸಿ ವ್ಯಾಲಿ, ಎಚ್‌ಎನ್‌ ವ್ಯಾಲಿ ನೀರನ್ನು ಸಂಸ್ಕರಿಸಿ ಬಿಡಲಾಗುತ್ತಿದೆ. ₹1700 ಕೋಟಿ ವೆಚ್ವದಲ್ಲಿ ವೃಷಭಾವತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಮಾರು 700 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುವುದು. ಸುಮಾರು 99 ಟಿಎಂಸಿ ನೀರಿನ ಲಭ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ಕೃಷ್ಣಾ ಟ್ರಿಬ್ಯುನಲ್‌ ತೀರ್ಪಿನ ನಂತರ ನೋಟಿಫಿಕೇಷನ್‌ ಮಾಡಬೇಕಾಗಿದೆ. ನದಿಯ ಡ್ಯಾಂ ಎತ್ತರ ಮಾಡಲು ಟ್ರಿಬ್ಯುನಲ್‌ ತೀರ್ಪು ನಮ್ಮ ಪರವಾಗಿ ಬಂದಿದೆ. ಕೇಂದ್ರ ಸರ್ಕಾರ ಇನ್ನೂ ನೋಟಿಫಿಕೇಷನ್‌ ಮಾಡದೆ ಇದ್ದರೂ, ನಾವು 35 ಲಕ್ಷ ಎಕರೆ ವ್ಯವಸಾಯ ಭೂಮಿ ಮತ್ತು 25 ಲಕ್ಷ ಎಕರೆ ಒಣ ಭೂಮಿ ಅಭಿವೃದ್ಧಿಪಡಿಸಲು ಭೂ ಸ್ವಾಧೀನಕ್ಕೆ ₹55 ಸಾವಿರ ಕೋಟಿ ಖರ್ಚು ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದರು.

ಶಾಸಕಿ ಎಂ.ರೂಪಕಲಾ, ತಹಶೀಲ್ದಾರ್‌ ಭರತ್‌, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.