
ಕೋಲಾರ: ರೈತರನ್ನು ಈ ದೇಶದ ಬೆನ್ನೆಲುಬು, ಅನ್ನದಾತರು ಎಂಬುದಾಗಿ ಬಿಂಬಿಸುತ್ತಾರೆ. ಆದರೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕೆಂದು ಭೂ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಸಿಪಿಎಂ ಗೋಪಾಲ್ ಅಭಿಪ್ರಾಯಪಟ್ಟರು
ತಾಲ್ಲೂಕಿನ ಅರಿನಾಗನಹಳ್ಳಿ ಹತ್ತಿರವಿರುವ ಸಭಾಂಗಣದಲ್ಲಿ ಅರಣ್ಯ ಇಲಾಖೆಯವರ ದೌರ್ಜನ್ಯಕ್ಕೆ ಒಳಗಾದ ಮೂರು ತಾಲ್ಲೂಕಿನ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಒಳಗೊಂಡಂತೆ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಆದಾಗ್ಯೂ ರೈತರ ಭೂಮಿಗಳ ಮೇಲೆ ಒತ್ತುವರಿ ಹೆಸರಿನಲ್ಲಿ ರೈತರಿಗೆ ಕಿರುಕುಳ, ಪೊಲೀಸ್ ಠಾಣೆಗಳಲ್ಲಿ ಎಫ್ ಐ ಆರ್ ದಾಖಲು ಮಾಡುವುದು ನಿಂತಿಲ್ಲ. ಆದ್ದರಿಂದ ಮುಂದಿನ ಹೋರಾಟ, ಪ್ರತಿಭಟನೆಗೆ ಎಲ್ಲರೂ ಸಿದ್ದರಾಗಬೇಕು. ಅರಣ್ಯ ಇಲಾಖೆಯವರ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ತಿಳಿಸಿದರು.
ಮತ್ತೊಬ್ಬ ಸಂಚಾಲಕ ಆರ್.ಶ್ರೀನಿವಾಸನ್ ಮಾತನಾಡಿ, 'ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಕಂದಾಯ ಇಲಾಖೆಯ ಸರ್ಕಾರಿ ಗೋಮಾಳ ಜಮೀನುಗಳಲ್ಲಿನ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು' ಎಂದರು.
ಮುಖಂಡ ಪಾಪೇಗೌಡರು ಮಾತನಾಡಿ, ‘ಅರಣ್ಯ ಇಲಾಖೆಯವರು ತಮ್ಮ ಇಲಾಖೆಗೆ ಬಂದಂತಹ ಅನುದಾನಗಳನ್ನು ಸರಿಯಾಗಿ ಬಳಕೆ ಮಾಡಿದ್ದರೆ ವಾತಾವರಣದಲ್ಲಿ ಯಾವುದೇ ಏರುಪೇರು ಆಗುತ್ತಿರಲಿಲ್ಲ. ಎಲ್ಲಿಯೂ ಸರಿಯಾಗಿ ಗಿಡಮರಗಳನ್ನು ನೆಟ್ಟು ಅದನ್ನು ಪೋಷಿಸಿರುವುದು ಕಂಡು ಬರುತ್ತಿಲ್ಲ’ ಎಂದು ಹೇಳಿದರು.
ಗೋವಿಂದಪ್ಪ ಮಾತನಾಡಿ, ‘ಕಿರು ಅರಣ್ಯ, ಗ್ರಾಮ ಅರಣ್ಯ, ಜಿಲ್ಲಾ ಅರಣ್ಯಗಳು ಸ್ವಾತಂತ್ರ ಪೂರ್ವದಲ್ಲಿ ಮಾರ್ಪಾಡಾಗಿವೆ. ಇದು ಅರಣ್ಯ ಇಲಾಖೆಯವರಿಗೆ ಅರ್ಥವೇ ಆಗುತ್ತಿಲ್ಲ’ ಎಂದರು.
ಪಾತಕೋಟೆ ನವೀನ್ ಮಾತನಾಡಿ, ‘ರೈತರ ಭೂಮಿ ಕಂದಾಯ ಇಲಾಖೆಯವರು ಸಕ್ಷಮ ಪ್ರಾಧಿಕಾರದಿಂದ ಕಾನೂನು ರೀತಿಯಲ್ಲಿ ನೀಡಿರುವುದರಿಂದ ನಮ್ಮ ಭೂಮಿ ನಮ್ಮ ಹಕ್ಕು ಮುಂದಿನ ಹೋರಾಟಕ್ಕೆ ಜಿಲ್ಲೆ ಎಲ್ಲಾ ರೈತರು ಸಜ್ಜಾಗಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಟಿ.ಎಂ.ವೆಂಕಟೇಶ್, ಹರಟಿ ಪ್ರಕಾಶ್, ಲೋಕೇಶ್, ಸೈಯದ್ ಫಾರೂಕ್, ಗಂಗಮ್ಮ ಮಂಜುಳಾ, ಶಂಕರಪ್ಪ, ವೆಂಕಟರಮಣಪ್ಪ, ಚಲಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.