ADVERTISEMENT

‌ಕೋಲಾರ | ಮನೆಗಳಿಗೆ ತ್ವರಿತವಾಗಿ ನೀರು ಪೂರೈಸಿ: ಮರಿಯಪ್ಪ ಕುಳ್ಳಪ್ಪ

ಜಲಜೀವನ ಮಿಷನ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಿಶ್ವಸಂಸ್ಥೆ ಪ್ರತಿನಿಧಿಗಳು ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:05 IST
Last Updated 3 ಸೆಪ್ಟೆಂಬರ್ 2025, 6:05 IST
<div class="paragraphs"><p>ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ವಿಶ್ವಸಂಸ್ಥೆ ಪ್ರತಿನಿಧಿಗಳು ಜೆಜೆಎಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು</p></div>

ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ವಿಶ್ವಸಂಸ್ಥೆ ಪ್ರತಿನಿಧಿಗಳು ಜೆಜೆಎಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು

   

ಕೋಲಾರ: ಜಲಜೀವನ ಮಿಷನ್‌ (ಜೆಜೆಎಂ) ಯೋಜನೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಮನೆ ಮನೆಗೆ ತ್ವರಿತವಾಗಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ವಹಿಸಬೇಕು ಎಂದು ವಿಶ್ವಬ್ಯಾಂಕ್ ಪ್ರತಿನಿಧಿ ಮರಿಯಪ್ಪ ಕುಳ್ಳಪ್ಪ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜೆಜೆಎಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಅನುಷ್ಠಾನದಿಂದ ನೀರಿನ ಸಮಸ್ಯೆ ನಿವಾರಣೆ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು.

ADVERTISEMENT

ವಿಶ್ವ ಬ್ಯಾಂಕ್ ಯೋಜನೆಗೆ ಸಹಕಾರ ನೀಡುತ್ತಿದ್ದು, ರಾಜ್ಯಕ್ಕೆ ₹ 70 ಸಾವಿರ ಕೋಟಿ ಒದಗಿಸಿದೆ. ಸಮರ್ಪಕವಾಗಿ ಯೋಜನೆಯನ್ನು ಜಾರಿಗೆ ತಂದು ಉದ್ದೇಶ ಈಡೇರಿಸಬೇಕು
ಎಂದರು.

ಸುಸ್ಥಿರವಾಗಿ ನೀರು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಮುಂದಿನ 30 ವರ್ಷ ಸಮಸ್ಯೆ ನಿವಾರಿಸಬಹುದು. ಕುಡಿಯುವ ನೀರು ಪೂರೈಕೆ ಮಾಡುವುದು ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ, ಸಮುದಾಯದ ಅತಿ ಮುಖ್ಯ ಜವಾಬ್ದಾರಿ. ಯೋಜನೆ ಅನುಷ್ಠಾನದಲ್ಲಿ 21ನೇ ಸ್ಥಾನದಲ್ಲಿದ್ದವರು ಪ್ರಗತಿಯಲ್ಲಿ ಸುಧಾರಣೆ ಕಂಡಿದ್ದೀರಿ ಎಂದು ಶ್ಲಾಘಿಸಿದರು.

ಓವರ್ ಹೆಡ್ ಟ್ಯಾಂಕ್‌ ಪರಿಶೀಲಿಸಿ ಸ್ವಚ್ಛತೆಗೊಳಿಸಬೇಕು. ಮೀಟರ್ ಮಾಹಿತಿಯ ಪುಸ್ತಕ ನಿರ್ವಹಣೆ ಮಾಡಬೇಕು, ಜಿಲ್ಲೆಯ 154 ಪಂಚಾಯಿತಿಗಳಲ್ಲೂ ಕಾರ್ಯಗತಗೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಸಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಖಾಫರ್ ಸುತಾರ್ ಮಾತನಾಡಿ, ‘ಜಿಲ್ಲೆಯು ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿದೆ. ನಾಲ್ಕನೇ ಹಂತದಲ್ಲಿ ಯೋಜನೆ ಜಾರಿಯಲ್ಲಿದ್ದು, ಹಿಂದಿನ ಜಿಲ್ಲೆಗಳಲ್ಲಿ ಆಗಿರುವ ತಪ್ಪುಗಳು ಇಲ್ಲಿ ಆಗುವುದು ಬೇಡ. ಬಹುಪಯೋಗಿ ಸಂಪರ್ಕ ಬಂದ್ ಮಾಡಬೇಕು’ ಎಂದು ತಿಳಿಸಿದರು.

ಪಿಡಿಒ ಸತೀಶ್ ಮಾತನಾಡಿ, ವರ್ಷದಿಂದ 24 ತಾಸು ನೀರು ಪೂರೈಕೆ ಮಾಡುವುದರಿಂದ ಸಮಸ್ಯೆ ಕಡಿಮೆಯಾಗಿದೆ. ದೂರುಗಳು ಕಡಿಮೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಜನರು ನೀರಿಗಾಗಿ ಕಾಯುವ ಪರಿಸ್ಥಿತಿ ಇಲ್ಲ ಎಂದರು.

ಸಭೆಯಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಡೆನ್ಮಾರ್ಕ್‌ನ ಕ್ರಿಸ್ಟೋಫರ್, ಜಿ.ಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ, ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಹಾಗೂ ಅಧಿಕಾರಿಗಳು ಇದ್ದರು.

ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಪೂರೈಸಲು ಜಲ ಜೀವನ್‌ ಮಿಷನ್‌ (ಜೆಜೆಎಂ) ಅನ್ನು 2019ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲೂ ಇದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಗೆ ನಿತ್ಯ 55 ಲೀಟರ್‌ ನೀರು ಪೂರೈಸಬೇಕೆಂಬ ಗುರಿ
ಹೊಂದಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.