ADVERTISEMENT

ಕೋಲಾರ: ಜಿಲ್ಲೆಯಲ್ಲಿ 23 ಕುಷ್ಠರೋಗ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:44 IST
Last Updated 1 ಫೆಬ್ರುವರಿ 2026, 7:44 IST
<div class="paragraphs"><p>ಕೋಲಾರದಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಚಾಲನೆ ನೀಡಿದರು </p></div>

ಕೋಲಾರದಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಚಾಲನೆ ನೀಡಿದರು

   

ಕೋಲಾರ: ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಫೆ.13ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.

ಕಚೇರಿಯಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ಆರೋಗ್ಯ ಇಲಾಖೆಯು ಸರ್ಕಾರಕ್ಕೆ ಆದಾಯ ದೊರಕಿಸಿಕೊಡುವ ಇಲಾಖೆಯಲ್ಲ. ಬದಲಿಗೆ ಸರ್ವರ ಆರೋಗ್ಯ ಕಾಪಾಡುವಂತಹ ಇಲಾಖೆ. ಉತ್ತಮ ಆರೋಗ್ಯವಿದ್ದಲ್ಲಿ ಮಾತ್ರ ಜನ ಒಳ್ಳೆಯ ಜೀವನ ನಡೆಸಬಲ್ಲರು. ಸಮಾಜದ ಪ್ರತಿಯೊಬ್ಬರ ಸ್ಪಾಸ್ಥ್ಯ ಕಾಪಾಡುವುದು ಆರೋಗ್ಯ ಇಲಾಖೆಯ ಪ್ರಮುಖ ಕೆಲಸ. ಬರೀ ದೈಹಿಕ ಆರೋಗ್ಯವಲ್ಲದೆ, ಮಾನಸಿಕ ಆರೋಗ್ಯ ಸಹ ಮುಖ್ಯ. ಇದಕ್ಕಾಗಿ ನಾವು, ನಮ್ಮ ಇಲಾಖೆ ಕಟಿಬದ್ಧರಾಗಿ ಕೆಲಸ ನಿರ್ವಹಿಸಬೇಕು ಎಂದರು.

ಕುಷ್ಠರೋಗದಿಂದ ಯಾರೂ ಬೇಸರ ಪಡಬೇಕಾಗಿಲ್ಲ. ಜನರು ಇಂತಹವರನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವಂತಾಗಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ‘ಕುಷ್ಠರೋಗದ ವ್ಯಕ್ತಿಗಳ ಘನತೆ ಕಾಪಾಡಿ ಒಳ್ಳೆಯ ರೀತಿ ನಡೆಸಿಕೊಳ್ಳುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಶಾಲಾ-ಕಾಲೇಜು, ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಗತ್ಯ. ಇಂತಹ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬಾರದು. ಪ್ರಾರಂಭಿಕವಾಗಿ ಈ ರೋಗಕ್ಕೆ ಚಿಕಿತ್ಸೆ ತೆಗೆದುಕೊಂಡರೆ ಗುಣಪಡಿಸಬಹುದು’ ಎಂದರು.

ಕ್ಷಯ ಹಾಗೂ ಕುಷ್ಠರೋಗ ನಿಯಂತ್ರಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ‘ಕುಷ್ಠರೋಗದ ಕುರಿತು ಜನರಿಗಿರುವ ತಪ್ಪು ಕಲ್ಪನೆ ಹೋಗಲಾಡಿಸಬೇಕು. ಈ ರೋಗವು ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಸೂಕ್ಷಾಣುವಿನಿಂದ ಬರುತ್ತದೆ. ದೇಹದ ಯಾವುದೇ ಭಾಗದ ಮೇಲೆ ತಿಳಿ, ಬಿಳಿ, ತಾಮ್ರ ವರ್ಣ ಮಚ್ಚೆ ಆಗುವುದು ಕೈ-ಕಾಲುಗಳ ಅಂಚು ನರಗಳು ದಪ್ಪಗಾಗುವುದು, ನರಗಳಲ್ಲಿ ಜೋಮು, ನೋವು, ಪಾದ ಅಂಗೈ ಭಾಗದಲ್ಲಿ ಅರಿವು ಕಡಿಮೆಯಾಗುವುದು ಈ ರೋಗದ ಲಕ್ಷಣ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಒಬ್ಬರಿಂದ ಮತ್ತೊಬರಿಗೆ ಹರಡುತ್ತದೆ. ನಂತರ ಅಂಗವಿಕಲತೆ ಸಹ ಸಂಭವಿಸಬಹುದು’ ಎಂದು ಹೇಳಿದರು.

ಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯಬೇಕು. ಈ ಕುರಿತು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ, ಶಾಲೆಗಳಲ್ಲಿ ಜಾಥಾ, ತಾಯಂದಿರ ಸಭೆ, ಶಾಲಾ-ಮಕ್ಕಳು, ಅಂಗನವಾಡಿಗಳಲ್ಲಿ ತಪಾಸಣೆ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 23 ಕುಷ್ಠರೋಗ ಪ್ರಕರಣಗಳು ಕಂಡುಬಂದಿದ್ದು, ಇವುಗಳಲ್ಲಿ 22 ಎಂ.ಬಿ ಹಾಗೂ 1 ಪಿ.ವಿ ಪ್ರಕರಣ ಎಂದು ಗುರುತಿಸಲಾಗಿದೆ. ಈ ಬಾರಿ ಸ್ಪರ್ಶ್ ಕುಷ್ಠರೋದ ಘೋಷ ವಾಕ್ಯ ‘ತಾರತಮ್ಯ ಮತ್ತು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು’ ಎಂಬುದಾಗಿದೆ. ಜನರು ಹೆಚ್ಚಿನ ಮಾಹಿತಿಗೆ ಜನರು 104ಕ್ಕೆ ಕರೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎನ್.ಕವನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.