
ಕೋಲಾರ: ಮಣ್ಣುಪಾಲಾಗಿದ್ದ ನೂರಾರು ಲೀಟರ್ ತುಪ್ಪದ ಫೋಟೊಗಳು ಬಹಿರಂಗವಾದ ಬೆನ್ನಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆವರಣದಲ್ಲಿ ಸ್ಮಾರ್ಟ್ ಮೊಬೈಲ್ ಬಳಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.
ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ಈಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದೇಶ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಆದೇಶ ಮಾರ್ಚ್ 2ರಿಂದಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ.
ಗುತ್ತಿಗೆ ಸಮಾಲೋಚಕರು, ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿಯು ಒಕ್ಕೂಟದ ಆವರಣ ಹಾಗೂ ಮುಖ್ಯಡೇರಿಗೆ ಮೊಬೈಲ್ ತರುವುದಕ್ಕೆ ಹಾಗೂ ಬಳಸದಂತೆ 2025ರ ಜುಲೈನಲ್ಲೇ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಅಧಿಕಾರಿಗಳಿಗೆ ನಿರ್ಬಂಧ ಇರಲಿಲ್ಲ.
ಈಚೆಗೆ ತುಪ್ಪ ವಿಭಾಗದ ಭಾವಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡು ಒಕ್ಕೂಟದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಮೊಬೈಲ್ ತರುವುದಕ್ಕೂ ಆಡಳಿತ ಮಂಡಳಿಯು ನಿರ್ಬಂಧ ವಿಧಿಸಿದೆ ಎಂದು ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಭಾಗಾಧಿಕಾರಿಗಳು ಸೂಚಿಸುವ ಕೆಲ ಅಧಿಕಾರಿಗಳು ಮಾತ್ರ ಸ್ಮಾರ್ಟ್ ಮೊಬೈಲ್ ಬಳಸಲು ಅವಕಾಶ, ಇನ್ನುಳಿದ ಅಗತ್ಯ ಸಿಬ್ಬಂದಿಗೆ ಕೀ ಪ್ಯಾಡ್ ಫೋನ್ ಬಳಸಲು ಅವಕಾಶ ನೀಡಲಾಗಿದೆ. ಇನ್ನುಳಿದ ಅಧಿಕಾರಿಗಳು, ಗುತ್ತಿಗೆ ಸಮಾಲೋಚಕರು, ಗುತ್ತಿಗೆ ಕಾರ್ಮಿಕರು, ಭದ್ರತಾ ಸಿಬ್ಬಂದಿ ಯಾವ ರೀತಿಯ ಮೊಬೈಲ್ ತರುವಂತಿಲ್ಲ, ಬಳಸುವಂತಿಲ್ಲ.
ಯಾವ ಅಧಿಕಾರಿಗಳು ಸ್ಮಾರ್ಟ್ ಫೋನ್ ಬಳಸಬಹುದು, ಯಾವ ಅಧಿಕಾರಿಗಳು, ಸಿಬ್ಬಂದಿ ಕೀ ಪ್ಯಾಡ್ ಫೋನ್ ಬಳಸಬಹುದು ಎಂಬ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.
ಮಾರುಕಟ್ಟೆ ವಿಭಾಗದ ಇಬ್ಬರು ಸಹಾಯಕ ವ್ಯವಸ್ಥಾಪಕರು ಹಾಗೂ ಮಾರುಕಟ್ಟೆ ಅಧಿಕಾರಿಯು ಆವರಣದಲ್ಲಿ ಸ್ಮಾರ್ಟ್ ಫೋನ್ ಬಳಸಬಹುದಾಗಿದೆ. ಹಾಗೆಯೇ ಆಡಳಿತ ವಿಭಾಗದ ಮೂವರು, ಲೆಕ್ಕ ವಿಭಾಗದ ಇಬ್ಬರು, ಎಂಐಎಸ್ ವಿಭಾಗದ ಒಬ್ಬರು, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ನಾಲ್ವರು, ಮಾರುಕಟ್ಟೆ ವಿಭಾಗದ ಮೂವರು, ಎಂಜಿನಿಯರಿಂಗ್ ವಿಭಾಗದ ಇಬ್ಬರು, ಮೂವರು ಗುತ್ತಿಗೆ ಚಾಲಕರು ಕೀ ಪ್ಯಾಡ್ ಮೊಬೈಲ್ ಬಳಸಲು ಅನುಮತಿಸಲಾಗಿದೆ. ಆದೇಶದಲ್ಲಿ ಅವರ ಹೆಸರನ್ನೂ ನಮೂದಿಸಲಾಗಿದೆ. ಅಲ್ಲದೇ, ಒಕ್ಕೂಟದ ಕಾರ್ಮಿಕ, ಭದ್ರತಾ ಹಾಗೂ ಲೋಡಿಂಗ್ ಗುತ್ತಿಗೆದಾರರ ಮೇಲ್ವಿಚಾರಕರು ಮತ್ತು ಸೂಪರ್ವೈಸರ್ಗಳು ಕೀ ಪ್ಯಾಡ್ ಮೊಬೈಲ್ ಬಳಸಲು ಅನುಮತಿಸಲಾಗಿದೆ.
ಒಕ್ಕೂಟದ ಈ ಕ್ರಮಕ್ಕೆ ಕೆಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರಿಂದ ಆಕ್ಷೇಪವೂ ವ್ಯಕ್ತವಾಗಿದೆ. ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂದೂ ಟೀಕಿಸಿದ್ದಾರೆ.
ಶಾಲಾ ಮಕ್ಕಳು ಮೊಬೈಲ್ ಬಳಸದಂತೆ ಕ್ರಮ ವಹಿಸಲು ರಾಜ್ಯ ಸರ್ಕಾರ ಆಲೋಚನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರು ಮೊಬೈಲ್ ಬಳಸಲು ನಿರ್ಬಂಧ ವಿಧಿಸಿರುವ ಒಕ್ಕೂಟದ ಕ್ರಮ ಚರ್ಚೆಗೆ ಗ್ರಾಸವಾಗಿದೆ.
---
ಕೀ ಪ್ಯಾಡ್ ಫೋನ್ ಖರೀದಿಗೆ ಕ್ರಮ
ಕೋಮುಲ್ ಆಡಳಿತ ಮಂಡಳಿಯು ಒಕ್ಕೂಟದ ವಿವಿಧ ವಿಭಾಗಗಳಿಗೆ ಅವಶ್ಯವಿರುವ ಕೀ ಪ್ಯಾಡ್ ಫೋನ್ ಖರೀದಿಗೂ ಅವಕಾಶ ಮಾಡಿಕೊಟ್ಟಿದೆ. ವಿಭಾಗದ ದೈನಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪಾಳಿಯಲ್ಲಿ ಹಾಜರಿರುವ ಸಿಬ್ಬಂದಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
ನಿಗಾ ಇಡಲು ಕಾರ್ಯಪಡೆ ರಚನೆ
ಮೊಬೈಲ್ ಬಳಕೆ ಸಂಬಂಧ ಸಂಬಂಧ ನಿಗಾ ಇಡಲು ಕಾರ್ಯಪಡೆ ರಚಿಸಲಾಗಿದೆ. ನಿಯಮ ಉಲ್ಲಂಘಿಸಿರುವುದು ಈ ಕಾರ್ಯಪಡೆಗೆ ಕಂಡುಬಂದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಮೊಬೈಲ್ ಬಳಕೆ ನಿಷೇಧ ಏಕೆ?
ಒಕ್ಕೂಟದ ತುಪ್ಪ ವಿಭಾಗದ ಕೆಲ ಫೋಟೊಗಳು ಈಚೆಗೆ ಮಾಧ್ಯಮಗಳಿಗೆ ಸಿಕ್ಕಿದ್ದು ಒಂದು ಕಾರಣವಾದರೆ ಇನ್ನೊಂದು ಕಾರಣ ಕೆಲಸ ಅವಧಿಯಲ್ಲಿ ಅತಿಯಾದ ಮೊಬೈಲ್ ಬಳಕೆ ಎನ್ನಲಾಗಿದೆ. ಒಕ್ಕೂಟದ ಆವರಣ ಮುಖ್ಯಡೇರಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ವಿನಾಕಾರಣ ಮೊಬೈಲ್ಗಳಲ್ಲಿ ಸಂಭಾಷಣೆ ನಡೆಸುವುದು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್ ಫೇಸ್ಬುಕ್ ಯೂಟ್ಯೂಬ್ ಬಳಕೆ ರೀಲ್ಸ್ ವೀಕ್ಷಣೆ ಮಾಡುತ್ತಿರುವುದು ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.