ADVERTISEMENT

ಕೋಲಾರ | ಮರು ಮತ ಎಣಿಕೆ-ಲೋಪಕ್ಕೆ ಆಸ್ಪದ ಬೇಡ: ಕೆ.ಎಸ್‌.ಮಂಜುನಾಥ್‌ ಗೌಡ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:57 IST
Last Updated 18 ಅಕ್ಟೋಬರ್ 2025, 6:57 IST
ಕೋಲಾರದಲ್ಲಿ ಶುಕ್ರವಾರ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಸಂಬಂಧ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೋಲಾರದಲ್ಲಿ ಶುಕ್ರವಾರ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಸಂಬಂಧ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಕೋಲಾರ: ಸುಪ್ರೀಂ ಕೋರ್ಟ್‌ ಸೂಚನೆಯಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯನ್ನು ಅಚ್ಚುಕಟ್ಟಾಗಿ ಹಾಗೂ ನ್ಯಾಯಬದ್ಧವಾಗಿ ನಡೆಸುವಂತೆ ಮಾಜಿ ಶಾಸಕ ಬಿಜೆಪಿಯ ಕೆ.ಎಸ್‌.ಮಂಜುನಾಥ್‌ ಗೌಡ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್‌ಪಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ವಕೀಲರ ಜೊತೆ ಭೇಟಿ ನೀಡಿದ ಅವರು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ ಅವರಿಗೆ ಮನವಿ ಪತ್ರ ನೀಡಿ ಮರು ಮತ ಎಣಿಕೆ ವೇಳೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ ಎಂದು ಕೋರಿದರು. ಬಳಿಕ ಕಾನೂನು ಸುವ್ಯವಸ್ಥೆ, ಭದ್ರತೆ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ಅವರಿಗೆ ಮನವಿ ಪತ್ರ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್‌ ಗೌಡ, ‘2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಕೆಲ ಲೋಪಗಳು ಕಂಡುಬಂದಿದ್ದವು, ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಗೊಂದಲ ಉಂಟಾಗಿತ್ತು. ಮರು ಮತ ಎಣಿಕೆ ವೇಳೆ ಅಂಥ ಲೋಪಗಳು ಆಗದಂತೆ ನೋಡಿಕೊಳ್ಳಬೇಕು ಎಂಬುದಾಗಿ ಮನವಿ ಸಲ್ಲಿಸಿದ್ದೇನೆ, ಸದ್ಯದಲ್ಲೇ ಮರು ಎಣಿಕೆ ನಡೆಯಲಿದೆ. ಅದಕ್ಕೂ ಮೊದಲು ಜನಪ್ರತಿನಿಧಿಗಳ ಸಭೆಯನ್ನು ಜಿಲ್ಲಾಧಿಕಾರಿ ನಡೆಸಲಿದ್ದು, ಅಲ್ಲೂ ನಮ್ಮ ಸಲಹೆ ನೀಡುತ್ತೇವೆ’ ಎಂದರು.

ADVERTISEMENT

ಕಳೆದ ಬಾರಿ 14 ಟೇಬಲ್‌ಗಳನ್ನು ಎರಡು ಕೊಠಡಿಗಳಿಗೆ ಹಾಕಿದ್ದರು. ಇದರಿಂದ ಮತ್ತೊಂದು ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಒಂದೇ ಕೊಠಡಿಯಲ್ಲಿ ಎಣಿಕೆ ನಡೆಸಬೇಕು. 17 ಸಿ ಫಾರಂಗೆ ಸಂಬಂಧಿಸಿದಂತೆ 113 ಅರ್ಜಿಗಳಲ್ಲಿ ಸಹಿ ಇರಲಿಲ್ಲ. ಯಾವುದೇ ಕಾರಣಕ್ಕೆ ಸಹಿ ಜಾಗ ಖಾಲಿ ಬಿಡಬಾರದು. ಜೊತೆಗೆ ನಮಗೆ ಒಂದು ಜೆರಾಕ್ಸ್‌ ನೀಡಬೇಕು. ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೊಗ್ರಫಿ ಮಾಡಬೇಕು, ಪ್ರತಿ ಬೂತ್‌ಗೆ ಒಂದು ಕಡತ ನಿರ್ವಹಿಸಬೇಕು. ನಾಳೆ ಯಾರು ಕೇಳಿದರೂ ತೋರಿಸುವಂತಿರಬೇಕು ಎಂದು ಹೇಳಿದರು.

ಇವಿಎಂ ತೆರೆಯುವ ಮೊದಲು 16 ಎ ಫಾರಂ ನಂತೆ ಕ್ರಮ ವಹಿಸಬೇಕು. ಪ್ರತಿ ಬೂತ್‌ನಲ್ಲಿ ಎಷ್ಟು ಪುರುಷರು, ಎಷ್ಟು ಮಹಿಳೆಯರು ಇದ್ದಾರೆ, ಎಷ್ಟು ಮತದಾನ ಆಗಿತ್ತು ಎಂಬ ಮಾಹಿತಿ ಇಟ್ಟುಕೊಳ್ಳಬೇಕು. ಅದು ಇವಿಎಂ ಲೆಕ್ಕಾಚಾರಕ್ಕೆ ತಾಳೆ ಆಗುವಂತಿರಬೇಕು ಎಂದರು.

ಕಾನೂನು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ಎಸ್‌ಪಿಗೆ ಮನವಿ ಸಲ್ಲಿಸಲಾಗಿದೆ. ತಮ್ಮದೇ ಸರ್ಕಾರವಿದೆ ಎಂದುಕೊಂಡು ಕೆಲವರು ಗಲಾಟೆ ಮಾಡುವ ಸಾಧ್ಯತೆ ಇರುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ವೈ.ನಂಜೇಗೌಡರನ್ನು ಅಸಿಂಧು ಮಾಡಿ ಎಂದು ನಾವು ನ್ಯಾಯಾಲಯಕ್ಕೆ ಹೋಗಿರಲಿಲ್ಲ. ನಮ್ಮ ಮನವಿ ಮರು ಎಣಿಕೆ ಮಾಡಬೇಕು ಎಂಬುದೇ ಆಗಿತ್ತು. ಎಲ್ಲೂ ಮೋಸ ಆಗಿಲ್ಲವೆಂದರೆ ಅವರೇ ಗೆಲ್ಲಬಹುದು. ನಮಗೆ ಅನುಮಾನವಿರುವುದಕ್ಕೆ ನ್ಯಾಯಾಲಯ ಮೊರೆ ಹೋಗಿದ್ದೇವೆ. ನಾನು ಆಶಾವಾದಿಯಾಗಿದ್ದೇನೆ. ಸೋತರೆ ರಾಜಕೀಯ ಬಿಡುತ್ತೇನೆ ಎಂದೆಲ್ಲಾ ಹೇಳುವುದಿಲ್ಲ ಎಂದರು.

ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡ ಕೆಂಬೋಡಿ ನಾರಾಯಣಸ್ವಾಮಿ, ವಕೀಲರು, ಕಾರ್ಯಕರ್ತರು ಇದ್ದರು.

ಕಳೆದ ಬಾರಿಯಂತೆ ಗೊಂದಲಕ್ಕೆ ಅವಕಾಶ ನೀಡಬೇಡಿ ಕಾನೂನು ಸುವ್ಯವಸ್ಥೆ, ಭದ್ರತೆಗೆ ಒತ್ತು ನೀಡಿ ಒಂದೇ ಕೊಠಡಿಯಲ್ಲಿ ಎಣಿಕೆ ನಡೆಯಲಿ, ಸಂಪೂರ್ಣ ವಿಡಿಯೊಗ್ರಫಿ ಮಾಡಿ

10ರಿಂದ 15 ದಿನಗಳಲ್ಲಿ ಮರು ಮತ ಎಣಿಕೆ ಮಾಡುವ ಸಾಧ್ಯತೆ ಇದೆ. ಯಾವುದೇ ಗೊಂದಲ ಲೋಪ ಆಗದಂತೆ ಎಣಿಕೆ ಕಾರ್ಯ ನಡೆಸುವಂತೆ ಕೋರಿದ್ದೇನೆ
ಕೆ.ಎಸ್‌.ಮಂಜುನಾಥ್‌ ಗೌಡ ಮಾಜಿ ಶಾಸಕ
ಮರು ಚುನಾವಣೆಯೂ ನಡೆಯಬಹುದು
ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಒಪ್ಪಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ. ಮರು ಎಣಿಕೆಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಇವಿಎಂಗಳು ಕೆಟ್ಟು ಹೋಗಿದ್ದರೆ ಮತ್ತೆ ಚುನಾವಣೆ ನಡೆದರೂ ನಡೆಯಬಹುದು. ಹೀಗಾಗಿ ಸಾರ್ವಜನಿಕವಾಗಿ ಫಲಿತಾಂಶ ಘೋಷಿಸದಂತೆ ನ್ಯಾಯಾಲಯ ಸೂಚಿಸಿದೆ ಎಂದು ಕೆ.ಎಸ್‌.ಮಂಜನಾಥ್‌ ಗೌಡ ಹೇಳಿದರು. ಅಂಚೆ ಮತಗಳು ಇದ್ದವೋ ಇಲ್ಲವೋ ಗೊತ್ತಿಲ್ಲ. ಎಣಿಕೆಯ ವಿಡಿಯೋ ಕೂಡ ಇಲ್ಲ. ಏನಾಗಿದೆಯೋ ಗೊತ್ತಿಲ್ಲ. ನಾಪತ್ತೆ ಆಗಿದ್ದರೆ ಮರು ಚುನಾವಣೆಯೇ ನಡೆಯಬೇಕಾಗುತ್ತದೆ ಎಂದರು.
197 ಮತ ಅಮಾನ್ಯಗೊಂಡಿದ್ದೇಕೆ?
ಮಾಲೂರು ಕ್ಷೇತ್ರದಲ್ಲಿ ಅಮಾನ್ಯಗೊಂಡ 197 ಮತಗಳಿವೆ. ಅವುಗಳು ಏಕೆ ಅಮಾನ್ಯಗೊಂಡಿವೆ ಮತ್ತೆ ಮಾನ್ಯ ಆಗಬಹುದೇ ಎಂಬುದನ್ನೂ ಪರಿಶೀಲಿಸಬೇಕು. ಗೆಜೆಟೆಡ್‌ ಅಧಿಕಾರಿಯ ಸಹಿ ಇಲ್ಲವೆಂದು ಅಮಾನ್ಯ ಮಾಡಿರುತ್ತಾರೆ. ಮತದಾನ ಆಗಿರುವ ಮತಗಳನ್ನು ತಿರಸ್ಕಾರ ಮಾಡಬಾರದು. ಅದು ಯಾವುದೇ ಅಭ್ಯರ್ಥಿಗೆ ಬರಲಿ. ಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ರಾಮಮೂರ್ತಿ ಮೊದಲು ಸೋತಿರುತ್ತಾರೆ. ಎದುರಾಳಿ ಸ್ಪರ್ಧಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ ಇದ್ದು ಮರು ಎಣಿಕೆ ನಡೆಯುತ್ತದೆ. ಆಗ ಕೆಲ ಅಮಾನ್ಯ ಮತಗಳನ್ನು ಕಾನೂನು ರೀತಿ ಮಾನ್ಯ ಮಾಡಲಾಗುತ್ತದೆ ಎಂದು ಕೆ.ಎಸ್‌.ಮಂಜುನಾಥ್‌ ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.