ಕೋಲಾರ: ಸುಪ್ರೀಂ ಕೋರ್ಟ್ ಸೂಚನೆಯಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯನ್ನು ಅಚ್ಚುಕಟ್ಟಾಗಿ ಹಾಗೂ ನ್ಯಾಯಬದ್ಧವಾಗಿ ನಡೆಸುವಂತೆ ಮಾಜಿ ಶಾಸಕ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ಪಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ವಕೀಲರ ಜೊತೆ ಭೇಟಿ ನೀಡಿದ ಅವರು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಅವರಿಗೆ ಮನವಿ ಪತ್ರ ನೀಡಿ ಮರು ಮತ ಎಣಿಕೆ ವೇಳೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ ಎಂದು ಕೋರಿದರು. ಬಳಿಕ ಕಾನೂನು ಸುವ್ಯವಸ್ಥೆ, ಭದ್ರತೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರಿಗೆ ಮನವಿ ಪತ್ರ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಗೌಡ, ‘2023ರ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಕೆಲ ಲೋಪಗಳು ಕಂಡುಬಂದಿದ್ದವು, ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಗೊಂದಲ ಉಂಟಾಗಿತ್ತು. ಮರು ಮತ ಎಣಿಕೆ ವೇಳೆ ಅಂಥ ಲೋಪಗಳು ಆಗದಂತೆ ನೋಡಿಕೊಳ್ಳಬೇಕು ಎಂಬುದಾಗಿ ಮನವಿ ಸಲ್ಲಿಸಿದ್ದೇನೆ, ಸದ್ಯದಲ್ಲೇ ಮರು ಎಣಿಕೆ ನಡೆಯಲಿದೆ. ಅದಕ್ಕೂ ಮೊದಲು ಜನಪ್ರತಿನಿಧಿಗಳ ಸಭೆಯನ್ನು ಜಿಲ್ಲಾಧಿಕಾರಿ ನಡೆಸಲಿದ್ದು, ಅಲ್ಲೂ ನಮ್ಮ ಸಲಹೆ ನೀಡುತ್ತೇವೆ’ ಎಂದರು.
ಕಳೆದ ಬಾರಿ 14 ಟೇಬಲ್ಗಳನ್ನು ಎರಡು ಕೊಠಡಿಗಳಿಗೆ ಹಾಕಿದ್ದರು. ಇದರಿಂದ ಮತ್ತೊಂದು ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಒಂದೇ ಕೊಠಡಿಯಲ್ಲಿ ಎಣಿಕೆ ನಡೆಸಬೇಕು. 17 ಸಿ ಫಾರಂಗೆ ಸಂಬಂಧಿಸಿದಂತೆ 113 ಅರ್ಜಿಗಳಲ್ಲಿ ಸಹಿ ಇರಲಿಲ್ಲ. ಯಾವುದೇ ಕಾರಣಕ್ಕೆ ಸಹಿ ಜಾಗ ಖಾಲಿ ಬಿಡಬಾರದು. ಜೊತೆಗೆ ನಮಗೆ ಒಂದು ಜೆರಾಕ್ಸ್ ನೀಡಬೇಕು. ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೊಗ್ರಫಿ ಮಾಡಬೇಕು, ಪ್ರತಿ ಬೂತ್ಗೆ ಒಂದು ಕಡತ ನಿರ್ವಹಿಸಬೇಕು. ನಾಳೆ ಯಾರು ಕೇಳಿದರೂ ತೋರಿಸುವಂತಿರಬೇಕು ಎಂದು ಹೇಳಿದರು.
ಇವಿಎಂ ತೆರೆಯುವ ಮೊದಲು 16 ಎ ಫಾರಂ ನಂತೆ ಕ್ರಮ ವಹಿಸಬೇಕು. ಪ್ರತಿ ಬೂತ್ನಲ್ಲಿ ಎಷ್ಟು ಪುರುಷರು, ಎಷ್ಟು ಮಹಿಳೆಯರು ಇದ್ದಾರೆ, ಎಷ್ಟು ಮತದಾನ ಆಗಿತ್ತು ಎಂಬ ಮಾಹಿತಿ ಇಟ್ಟುಕೊಳ್ಳಬೇಕು. ಅದು ಇವಿಎಂ ಲೆಕ್ಕಾಚಾರಕ್ಕೆ ತಾಳೆ ಆಗುವಂತಿರಬೇಕು ಎಂದರು.
ಕಾನೂನು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ಎಸ್ಪಿಗೆ ಮನವಿ ಸಲ್ಲಿಸಲಾಗಿದೆ. ತಮ್ಮದೇ ಸರ್ಕಾರವಿದೆ ಎಂದುಕೊಂಡು ಕೆಲವರು ಗಲಾಟೆ ಮಾಡುವ ಸಾಧ್ಯತೆ ಇರುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಾಸಕ ಕೆ.ವೈ.ನಂಜೇಗೌಡರನ್ನು ಅಸಿಂಧು ಮಾಡಿ ಎಂದು ನಾವು ನ್ಯಾಯಾಲಯಕ್ಕೆ ಹೋಗಿರಲಿಲ್ಲ. ನಮ್ಮ ಮನವಿ ಮರು ಎಣಿಕೆ ಮಾಡಬೇಕು ಎಂಬುದೇ ಆಗಿತ್ತು. ಎಲ್ಲೂ ಮೋಸ ಆಗಿಲ್ಲವೆಂದರೆ ಅವರೇ ಗೆಲ್ಲಬಹುದು. ನಮಗೆ ಅನುಮಾನವಿರುವುದಕ್ಕೆ ನ್ಯಾಯಾಲಯ ಮೊರೆ ಹೋಗಿದ್ದೇವೆ. ನಾನು ಆಶಾವಾದಿಯಾಗಿದ್ದೇನೆ. ಸೋತರೆ ರಾಜಕೀಯ ಬಿಡುತ್ತೇನೆ ಎಂದೆಲ್ಲಾ ಹೇಳುವುದಿಲ್ಲ ಎಂದರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡ ಕೆಂಬೋಡಿ ನಾರಾಯಣಸ್ವಾಮಿ, ವಕೀಲರು, ಕಾರ್ಯಕರ್ತರು ಇದ್ದರು.
ಕಳೆದ ಬಾರಿಯಂತೆ ಗೊಂದಲಕ್ಕೆ ಅವಕಾಶ ನೀಡಬೇಡಿ ಕಾನೂನು ಸುವ್ಯವಸ್ಥೆ, ಭದ್ರತೆಗೆ ಒತ್ತು ನೀಡಿ ಒಂದೇ ಕೊಠಡಿಯಲ್ಲಿ ಎಣಿಕೆ ನಡೆಯಲಿ, ಸಂಪೂರ್ಣ ವಿಡಿಯೊಗ್ರಫಿ ಮಾಡಿ
10ರಿಂದ 15 ದಿನಗಳಲ್ಲಿ ಮರು ಮತ ಎಣಿಕೆ ಮಾಡುವ ಸಾಧ್ಯತೆ ಇದೆ. ಯಾವುದೇ ಗೊಂದಲ ಲೋಪ ಆಗದಂತೆ ಎಣಿಕೆ ಕಾರ್ಯ ನಡೆಸುವಂತೆ ಕೋರಿದ್ದೇನೆಕೆ.ಎಸ್.ಮಂಜುನಾಥ್ ಗೌಡ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.