ADVERTISEMENT

ಮುಳಬಾಗಿಲು: ಅಂಚೆ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಮಿಕರು

ಕಾರ್ಮಿಕ ವಿರೋಧಿ ನೀತಿ ರದ್ದುಗೊಳಿಸಲು ಕಾರ್ಮಿಕ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:20 IST
Last Updated 10 ಜುಲೈ 2025, 5:20 IST
ಮುಳಬಾಗಿಲು ತಾಲ್ಲೂಕು ಕಾರ್ಮಿಕ ಸಂಘಟನೆಗಳು ನಗರದಲ್ಲಿ ಮುಷ್ಕರ ನಡೆಸಿ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು
ಮುಳಬಾಗಿಲು ತಾಲ್ಲೂಕು ಕಾರ್ಮಿಕ ಸಂಘಟನೆಗಳು ನಗರದಲ್ಲಿ ಮುಷ್ಕರ ನಡೆಸಿ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು   

ಮುಳಬಾಗಿಲು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬುಧವಾರ ತಾಲ್ಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.

ಈ ಸಂದರ್ಭದಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದರು. 

ಕಾರ್ಮಿಕರ ವಿರೋಧಿ ನೀತಿಗಳನ್ನು ರದ್ದುಪಡಿಸಬೇಕು.8 ಗಂಟೆಗಳ ಕೆಲಸದ ಅವಧಿ, ಕಾಯಂ ಸೇವೆ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕು ಸೇರಿದಂತೆ ಇನ್ನಿತರ ಹಕ್ಕುಗಳನ್ನು ಕಸಿದುಕೊಂಡು, ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದೇ ಕಾರಣಕ್ಕಾಗಿ ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾದ ಕಾರ್ಮಿಕ ವಿರೋಧಿಯ ನಾಲ್ಕು ಸಂಹಿತೆಗಳನ್ನು ರೂಪಿಸಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಪುಣ್ಯಹಳ್ಳಿ ಶಂಕರಪ್ಪ ಮಾತನಾಡಿ, ‘ಇತ್ತೀಚಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ಸ್ವೀಂ ನೌಕರರಿಗೆ ರಾಷ್ಟ್ರವ್ಯಾಪಿ ₹26 ಸಾವಿರ ಹಾಗೂ ರಾಜ್ಯವ್ಯಾಪಿ ₹35 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಆಹಾರ, ಔಷಧಿ, ಕೃಷಿ ಸಾಮಗ್ರಿ ಸೇರಿ ಇನ್ನಿತರ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಬಾರದು. ಪೆಟ್ರೋಲ್, ಡೀಸೆಲ್, ಆಡುಗೆ ಅನಿಲ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರ ಭದ್ರತೆ ಖಾತ್ರಿಪಡಿಸಬೇಕು’ ಎಂದು ಒತ್ತಾಯಿಸಿದರು. 

ಬಹುಜನ ಸಂಘಟನೆ ಮುಖಂಡ ಸಂಗಸಂದ್ರ ವಿಜಯ್ ಕುಮಾರ್ ಮಾತನಾಡಿ, ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಯೋಜನೆ, ಹೆರಿಗೆ ಸೌಲಭ್ಯ, ಜೀವ ಮತ್ತು ಅಂಗವೈಕಲ್ಯ ವಿಮೆ ನೀಡಬೇಕು ಎಂದರು. 

ಎನ್‌ಪಿಎಸ್ ರದ್ದುಪಡಿಸಿ, ಒಪಿಎಸ್ ಪದ್ಧತಿ ಮರು ಸ್ಥಾಪಿಸಬೇಕು. ಇಎಸ್‌ಐ, ಪಿ.ಎಫ್, ಬೋನಸ್ ಪಾವತಿಗಿರುವ ಎಲ್ಲ ವೇತನ ಮಿತಿ ತೆಗೆಯಬೇಕು. ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು ಎಂದರು.

ಜಿಲ್ಲೆಯ ಬಿಜಿಎಂಎಲ್ ಚಿನ್ನದ ಗಣಿಯನ್ನು ಸರ್ಕಾರ ಪುನರ್ ಆರಂಭಿಸಬೇಕು. ಕಾರ್ಮಿಕರಿಗೆ ಬಾಕಿ ಇರುವ ಸೌಲಭ್ಯಗಳನ್ನು ಬಡ್ಡಿ ಸಹಿತ ವಿತರಿಸಬೇಕು. ಗಣಿ ಪ್ರದೇಶದಲ್ಲಿರುವ ಮನೆಗಳಲ್ಲಿ ವಾಸವಿರುವ ಗಣಿ ಕಾರ್ಮಿಕರಿಗೆ ಮನೆಗಳ ಸ್ವಾಧೀನ ಪತ್ರ ನೀಡಬೇಕು ಎಂದರು. 

ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸುರೇಶ್, ಜಿಲ್ಲಾ ಉಪಾಧ್ಯಕ್ಷ ಶಶಿಕುಮಾರ್, ಗ್ರಾಮ ಪಂಚಾಯಿತಿ ನೌಕರ ಸಂಘದ ನಾರಾಯಣಸ್ವಾಮಿ, ಆನಂದ, ಶಿವರಾಮಯ್ಯ, ಅಜಯ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರಾದ ನಾಗವೇಣಿ, ಸರೋಜಮ್ಮ, ಅಸ್ಮಾತಾಜ್, ವೀಣಾ, ಸುಜಾತಮ್ಮ ಶೈಲಾ, ರತ್ನಮ್ಮ, ಸಂಗಸಂದ್ರ ರಾಮಚಂದ್ರ ಇದ್ದರು.

ಅಸಂಘಟಿತ ಕಾರ್ಮಿಕರಿಗೆ ಭದ್ರತೆ

ಅಗತ್ಯ ಗುತ್ತಿಗೆ ಹೊರ ಗುತ್ತಿಗೆ ನಿಗದಿತ ಅವಧಿಯ ಉದ್ಯೋಗ ಅಪ್ರೆಂಟಿಸ್ ಟ್ರೈನಿ ನ್ಯಾಪ್ಸ್ ಸೇರಿ ಇನ್ನಿತರ ಹೆಸರಿನಲ್ಲಿ ಮಾಡಲಾಗುವ ನೇಮಕಾತಿಯನ್ನು ನಿಲ್ಲಿಸಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡ ರೆಡ್ಡಪ್ಪ ಒತ್ತಾಯಿಸಿದರು.  ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ತಕ್ಷಣವೇ ಜಾರಿಯಾಗಬೇಕು. ಕಟ್ಟಡ ಕಾರ್ಮಿಕರು ಆಟೊ–ಟ್ಯಾಕ್ಸಿ ಚಾಲಕರು ಮನೆಗೆಲಸಗಾರರು ಗಿಗ್ ಕಾರ್ಮಿಕರು ಬೀದಿಬದಿ ವ್ಯಾಪಾರಿಗಳು ಟೈಲರ್‌ಗಳು ಫೋಟೊಗ್ರಾಫರ್‌ಗಳು ಮೆಕಾನಿಕ್‌ಗಳು ಬೀಡಿ ಮತ್ತು ಅಗರಬತ್ತಿ ತಯಾರಿಸುವವರು ಸೇರಿ ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹9000 ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.