ಮಾಲೂರು: ಪಟ್ಟಣದಲ್ಲಿ ಪ್ರತಿದಿನ ಮುಂಜಾನೆ ನಡೆಯುವ ತರಕಾರಿ ಸಂತೆ ಮೈದಾನದಲ್ಲಿ ಸ್ವಚ್ಛತೆ ಸಮಸ್ಯೆ ಎದುರಾಗಿದ್ದು, ರೈತರು ಹಾಗೂ ಪಟ್ಟಣದ ಜನತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
ಹನುಮಂತ ನಗರದಲ್ಲಿರುವ ಪುರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 2 ಎಕರೆ ಖಾಲಿ ಪ್ರದೇಶದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ರೈತರು ತಾವು ಬೆಳೆದ ತರಕಾರಿ ಮತ್ತು ವಿವಿಧ ಸೊಪ್ಪು ತಂದು ವ್ಯಾಪಾರ ನಡೆಸುತ್ತಾರೆ.
ಆಗತಾನೆ ಬಿಡಿಸಿ ತರುವ ತಾಜಾತರಕಾರಿ ಖರೀದಿಸಲು ನಾಗರಿಕರು ಮುಗಿಬೀಳುವುದು ಸಹಜ ಸಂಗತಿ. ಮಾಲೂರು-ಕೋಲಾರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಈ ಸಂತೆ ಮೈದಾನ ಮುಖ್ಯರಸ್ತೆ ಹಾಗೂ ಆಜುಬಾಜಿನ ರಸ್ತೆಗಳಿಗೆ ಹೋಲಿಸಿದರೆ ತಗ್ಗಿನಲ್ಲಿದೆ. ಸಂತೆ ಸುತ್ತಮುತ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಎಲ್ಲೆಂದರಲ್ಲಿ ನಿಲ್ಲುತ್ತದೆ. ಈ ನೀರಿನಲ್ಲಿ ಉಳಿದ ತರಕಾರಿಗಳು ಬೆರೆತು ಕ್ರಮೇಣ ಕೊಳೆತು ದುರ್ಗಂಧಕ್ಕೀಡಾಗಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಗಿದೆ.
ಪುರಸಭೆ ಆಡಳಿತದ ನಿರ್ಲಕ್ಷ್ಯ: ವರ್ಷಕ್ಕೊಮ್ಮೆ ಸಂತೆ ಸುಂಕ ಹರಾಜು ಮಾಡಲಾಗುತ್ತದೆ. ಬಿಡ್ ಪಡೆದವರು ಪ್ರತಿದಿನ ಸಂತೆಗೆ ಬರುವ ರೈತರಿಂದ ಇಂತಿಷ್ಟು ಹಣ ವಸೂಲಿ ಮಾಡುತ್ತಾರೆ. ಆದರೆ, ಯಾವುದೇ ರೀತಿ ಸೌಲಭ್ಯ ಒದಗಿಸಿಲ್ಲ ಎಂಬುದು ರೈತ ಬಾಬು ಅವರ ಆರೋಪ.
ಮಳೆ ಬಂದರೆ ಸಂತೆ ಮೈದಾನದಲ್ಲಿರುವ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡು ರಸ್ತೆಗಳು ಹದಗೆಡುತ್ತವೆ. ತರಕಾರಿ ಖರೀದಿಸಲು ಹೆಚ್ಚಾಗಿ ಮಹಿಳೆಯರು, ಮಕ್ಕಳು ಕೊಚ್ಚೆಯಲ್ಲಿ ಬಿದ್ದು ಎದ್ದು ಬರಬೇಕು. ಅಲ್ಲದೇ, ಕುಡಿಯುವ ನೀರು ಮತ್ತು ಶೌಚಾಲಯ ಸೌಕರ್ಯ ಇಲ್ಲದೆ ಬಹಳ ತೊಂದರೆಯಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಗಮನವಹಿಸಿ ಸ್ವಚ್ಛತೆಯ ಜತೆಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ತರಕಾರಿ ವ್ಯಾಪಾರಿ ಮಂಜುನಾಥ್ ಒತ್ತಾಯಿಸುತ್ತಾರೆ.
ತರಕಾರಿ ಖರೀದಿಸಬೇಕೆಂದು ಬಂದರೆ ಇಲ್ಲಿ ಸ್ವಚ್ಛತೆ ಇಲ್ಲದೆ ಸಂತೆ ಒಳಗೆ ಕಾಲಿಡಲು ಆಗುತ್ತಿಲ್ಲ. ಕೊಳೆತ ತರಕಾರಿಗಳಿಂದ ದುರ್ವಾಸನೆ ಬೀರುತ್ತಿದ್ದು, ಬಹಳ ತೊಂದರೆಯಾಗಿದೆ ಎನ್ನುತ್ತಾರೆ ಗ್ರಾಹಕ ದಿನೇಶ್ ಗೌಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.