ಮಾಲೂರು: ನಗರದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಪಿಎಲ್ಡಿ ಬ್ಯಾಂಕ್ ರೈತರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದು, ಶೇ 82ರಷ್ಟು ಸಾಲ ಮರು ವಸೂಲಾತಿ ಮಾಡುವ ಮೂಲಕ ಎರಡು ಜಿಲ್ಲೆಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2820 ಮಂದಿ ಷೇರುದಾರರಿದ್ದಾರೆ. ಸಾಲ ಪಡೆದವರು ಬಳಸಿಕೊಂಡು ನಂತರ ಸಾಲ ಮರುಪಾವತಿ ಮಾಡಿದರೆ ಬೇರೆಯವರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ ಎಂದರು.
ಬ್ಯಾಂಕ್ ಅಧ್ಯಕ್ಷರು ನಿವೇಶನಕ್ಕೆ ಮನವಿ ಮಾಡಿದ್ದು, ನಿವೇಶನ ಮಂಜೂರು ಮಾಡಿಸಲಾಗುವುದು. ಸಹಕಾರ ಸಂಘಗಳು ರೈತರಿಗೆ ಬೆನ್ನೆಲುಬು ಇದ್ದಂತೆ ಎಂದರು.
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್ ಮಾತನಾಡಿ, 80 ವರ್ಷಗಳಿಂದ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಿದೆ. ಪ್ರಸ್ತುತ ₹ 896.36 ಲಕ್ಷ ನಷ್ಟದಲ್ಲಿದೆ. ಮುಂಬರುವ ದಿನಗಳಲ್ಲಿ ಕಠಿಣ ಕ್ರಮಗಳ ಮೂಲಕ ಹೆಚ್ಚು ಸಾಲ ವಸೂಲಾತಿ ಗುರಿ ಹೊಂದಿದ್ದು, ಹಾಲಿ ನಷ್ಟವನ್ನು ತುಂಬಿಕೊಳ್ಳಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.
ಹನುಮಂತಪ್ಪ, ಶ್ರೀನಿವಾಸ್, ರಮೇಶ್, ವೆಂಕಟೇಶಪ್ಪ, ಎಸ್.ಕೃಷ್ಣಾರೆಡ್ಡಿ, ಕೆ.ಆರ್.ನಾರಾಯಣಸ್ವಾಮಿ, ಎಸ್.ವಿ.ದಯಾನಂದ ಗೌಡ, ತೇಜಸ್ ಗೌಡ, ಅಂಬರೀಶ್, ರವಿಕುಮಾರ್, ಎಂ.ಲಕ್ಷ್ಮಿನಾರಾಯಣ್, ಎಸ್.ಸಿ.ನಾರಾಯಣಸ್ವಾಮಿ, ಎ.ಎನ್.ಮುನಿರಾಜು, ಇಂದಿರಾ ಎಂ.ಜಿ., ಮಂಜುಳಾ ಮುನಿಗಂಗಪ್ಪ, ನಾಗರಾಜ ಡಿ.ಕೆ, ಸುರೇಶ್ ಬಾಬು, ರಮೇಶ್, ವಿನೋದ್, ವಿ.ಎಂ.ಚಂದ್ರಶೇಖರ್ ರೆಡ್ಡಿ, ಯಶೋಧ, ನವೀನ್ ಕುಮಾರ್, ಕೆ.ಟಿ.ರವಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.