
ಮುಳಬಾಗಿಲು: ಜಿಲ್ಲಾಧಿಕಾರಿಗಳ ಆದೇಶದಂತೆ ನಗರಸಭೆಯ ಪೌರಾಯುಕ್ತ ವಿ.ಶ್ರೀಧರ್ ನೇತೃತ್ವದಲ್ಲಿ ಶನಿವಾರ ಸ್ವಚ್ಛತಾ ಆಂದೋಲನ ನಡೆಯಿತು.
ಆಂದೋಲನದ ಅಂಗವಾಗಿ ನಗರಸಭೆ ಸಿಬ್ಬಂದಿ ಶನಿವಾರ ಬೆಳಗ್ಗೆಯಿಂದ ಸಂಜೆ 7ರವರೆಗೆ ನಗರ ಹಾಗೂ ಕಟ್ಟಡ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು. ತ್ಯಾಜ್ಯ ಸಾಗಿಸಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ನಾಲ್ಕು ತಂಡಗಳು ನಗರದ ನಾಲ್ಕು ಭಾಗಗಳಲ್ಲಿದ್ದ ಕಸವನ್ನು ವಾಹನಗಳಲ್ಲಿ ಸಾಗಿಸಿ, ನಗರವನ್ನು ಸುಂದರಗೊಳಿಸಿದರು.
ನಗರದ ಕೆಜಿಎಫ್ ಮುಖ್ಯ ರಸ್ತೆಯಿಂದ 33 ಟನ್ ಕಸ, ರಾಮಸಮುದ್ರಂ ಮುಖ್ಯರಸ್ತೆಯ ಮೂಲಕ 170 ಟನ್, ಕೆ.ಬೈಯಪ್ಪನಹಳ್ಳಿ ಹಾಗೂ ಮಲ್ಲನಾಯಕನಹಳ್ಳಿ ರಸ್ತೆಗಳಿಂದ 180 ಟನ್ ಮತ್ತು ನ್ಯಾಯಾಲಯ ಕಟ್ಟಡಗಳ ಸಂಕೀರ್ಣ ರಸ್ತೆಯಿಂದ 280 ಟನ್ ಹಾಗೂ ಕೋಲಾರ ಶ್ರೀನಿವಾಸಪುರ ರಸ್ತೆಯಿಂದ 90 ಟನ್ ಸೇರಿದಂತೆ ಒಟ್ಟು ತ್ಯಾಜ್ಯ 100 ಟನ್ ಕಸ. ಜೊತೆಗೆ ಹಳೆಯ ಕಟ್ಟಡಗಳ 1,050 ಟನ್ ಕಸವನ್ನು 7 ಬೃಹತ್ ಯಂತ್ರಗಳು, 4 ಟಿಪ್ಪರ್, 14 ಟ್ರಾಕ್ಟರ್ಗಳಲ್ಲಿ ವಿಲೇವಾರಿ ಮಾಡಲಾಯಿತು ಎಂದು ಪೌರಾಯುಕ್ತ ವಿ.ಶ್ರೀಧರ್ ತಿಳಿಸಿದರು.
ಕಸವನ್ನು ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ರಚ್ಚಬಂಡಹಳ್ಳಿ ಮತ್ತಿತರರ ಖಾಲಿ ಸ್ಥಳಗಳಲ್ಲಿ ಕಸವನ್ನು ಸುರಿಯಲಾಯಿತು. ಹಸಿ ಕಸ ಹಾಗೂ ಪಣ ಕಸವಾಗಿ ಬೇರ್ಪಡಿಸಿ ಕಸವನ್ನು ನಾಶಪಡಿಸಲಾಯಿತು ಎಂದರು.
ಇನ್ನು ಮುಂದೆ ನಗರದಲ್ಲಿ ಯಾರೇ ಆಗಲಿ ಕಸವನ್ನು ಎಲ್ಲೆಂದರಲ್ಲಿ ಸುರಿಯಬಾರದು. ಕೋಲಾರಮ್ಮ ಸ್ವಚ್ಛತಾ ವಾಹನ ಗಸ್ತು ತಿರುಗುತ್ತಿರುತ್ತದೆ. ಯಾರೇ ಆಗಲಿ ಕಸವನ್ನು ಎಲ್ಲೆಂದರಲ್ಲಿ ಸುರಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.