ADVERTISEMENT

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಕೆ.ಶ್ರೀನಿವಾಸಗೌಡ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:47 IST
Last Updated 2 ಜನವರಿ 2020, 14:47 IST
   

ಕೋಲಾರ: ‘ಶಾಸಕನಾಗಿ ಆಯ್ಕೆಯಾದಾಗಿನಿಂದ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ತೋರಿಲ್ಲ, ಆರೋಪ ಮಾಡುವ ವ್ಯಕ್ತಿಗಳು ಸತ್ಯ ತಿಳಿದು ಮಾತನಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಚುಂಚದೇನಹಳ್ಳಿ, ಪೆಮ್ಮಶೆಟ್ಟಿಹಳ್ಳಿ, ಚಲ್ಲಹಳ್ಳಿ ಗ್ರಾಮಗಳಲ್ಲಿ ₨ 50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಹಿಂದೆ ಇದ್ದಂತಹ ಶಾಸಕ ಏನು ಕೆಲಸ ಮಾಡಿಲ್ಲ, ಆ ವ್ಯಕ್ತಿಯನ್ನು ಜನ ತಿರಸ್ಕರಿಸಿ ನನಗೆ ಅವಕಾಶ ನೀಡಿದ್ದು, ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ಗ್ರಾಮಗಳಲ್ಲಿ ಮುಖಂಡರು ಸಹ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ಏನೇ ಸಮಸ್ಯೆಗಳು ಕಂಡು ಬಂದರು ನನ್ನ ಗಮನಕ್ಕೆ ತರಬೇಕು. ಅದು ಬಿಟ್ಟು ಗುಂಪುಗಳು ಕಟ್ಟಿಕೊಂಡು ರಾಜಕೀಯ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಗ್ರಾಮಗಳಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಮುಖಂಡರ ಮೇಲಿದೆ’ ಎಂದರು.

ADVERTISEMENT

‘ಸರ್ಕಾರವೇ ಎಲ್ಲಾ ಕೆಲಸ ಮಾಡಬೇಕು ಎಂಬ ಮನಸ್ಥಿತಿ ದೂರವಾಗಬೇಕು. ನಿಮ್ಮ ಮನೆಯ ಮುಂದಿನ ಚರಂಡಿ ಸ್ವಚ್ಚಗೊಳಿಸಲು ಸರ್ಕಾರವೇ ಬರಬೇಕು ಎಂದರೆ ಹೇಗೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿಂದೆ ಸಾಮೂಹಿಕ ಶ್ರಮದಾನ ಇತ್ತೀಚಿನ ದಿನಗಳಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ. ಅದನ್ನು ಮರುಸ್ಥಾಪಿಸಿ ಗ್ರಾಮಗಳಲ್ಲಿ ಸೌಹಾರ್ದತೆ ನಿರ್ಮಿಸಲು ಸಹಕಾರ ನೀಡಬೇಕು’ ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸುರೇಶ್, ಗ್ರಾ.ಪಂ ಸದಸ್ಯ ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.