ಕೆಜಿಎಫ್: ಕಾಡಾನೆಗಳು ಪದೇ ಪದೇ ಕಾಡಂಚಿನ ರೈತನ ಜಮೀನಿನ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತಿವೆ. ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಕೋರಲಾಗಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.
ನಗರದ ಹೊರವಲಯದ ಘಟ್ಟಮಾದಮಂಗಲ ಪಂಚಾಯತಿಯ ಕೆಂಪಾಪುರ ಗ್ರಾಮದಲ್ಲಿ ಆನೆಗಳ ಉಪಟಳದಿಂದ ಹಾನಿಗೊಳಗಾದ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಆಂಧ್ರ ಮತ್ತು ತಮಿಳುನಾಡು ಗಡಿಭಾಗದಲ್ಲಿ ಆನೆಗಳು ರೈತರು ಬೆಳೆದಿದ್ದ ಫಸಲನ್ನು ನಾಶ ಮಾಡುತ್ತಿವೆ. ನೀರು ಹಾಯಿಸಲು ನಿರ್ಮಾಣ ಮಾಡಿದ್ದ ಪಂಪ್ ಹೌಸ್ಗಳನ್ನು ಧ್ವಂಸ ಗೊಳಿಸುತ್ತಿವೆ. ಹನಿ ನೀರಾವರಿ ಪೈಪುಗಳನ್ನು ತುಂಡರಿಸುತ್ತಿವೆ’ ಎಂದರು.
‘ಹಿಂಡು ಹಿಂಡಾಗಿ ನುಗ್ಗುವ ಆನೆಗಳಿಂದ ರೈತರು ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಆನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಮಾರ್ಗೋಪಾಯಗಳನ್ನು ಅಳವಡಿಸಬೇಕು ಎಂದರು. ಆನೆಗಳಿಂದ ಬೆಳೆ ನಾಶವಾದ ರೈತರಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ತಹಶೀಲ್ದಾರ್ ಕೆ.ರಮೇಶ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.