ಕೋಲಾರ: ಜಿಲ್ಲಾ ಕೇಂದ್ರದ ಹಲವೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಹೆಸರಿನಲ್ಲಿ ಕೋಮು ಭಾವನೆ ಪ್ರಚೋದಿಸುವ ಭಿತ್ತಿಪತ್ರ ಅಂಟಿಸಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ಭಯೋತ್ಪಾದಕರ ಪರವಾದ ಗೋಡೆ ಬರಹ ಬರೆದು ವಿವಾದ ಸೃಷ್ಟಿಸಲಾಗಿತ್ತು. ಇದರ ಬೆನ್ನಲ್ಲೇ ನಗರದ ಹಲವೆಡೆ ಬಾಬರಿ ಮಸೀದಿ ವಿವಾದ ಕುರಿತ ಪ್ರಚೋದನಕಾರಿ ಸಂದೇಶವುಳ್ಳ ಭಿತ್ತಿಪತ್ರ ಅಂಟಿಸಲಾಗಿದೆ.
ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಲಾಕ್ಟವರ್, ಬಂಬೂ ಜಜಾರ್, ಶಹಿನ್ಷಾ ನಗರ, ಅಮ್ಮವಾರಿಪೇಟೆ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಈ ಭಿತ್ತಿಪತ್ರಗಳು ರಾರಾಜಿಸುತ್ತಿವೆ. ಭಿತ್ತಿಪತ್ರಗಳಲ್ಲಿ ‘ಬಾಬರಿ ಒಂದು ದಿನ ಎದ್ದು ನಿಲ್ಲಲಿದೆ, 6 ಡಿಸೆಂಬರ್ 1992 ನಾವು ಮರೆಯದಿರೋಣ’ ಎಂಬ ಸಂದೇಶವಿದೆ. ಭಿತ್ತಿಪತ್ರದ ಕೊನೆಯಲ್ಲಿ ಪಿಎಫ್ಐ ಸಂಘಟನೆಯ ಹೆಸರು ಉಲ್ಲೇಖಿಸಲಾಗಿದೆ.
ಈ ವಿಷಯ ತಿಳಿದ ಪೊಲೀಸರು ಸೋಮವಾರ ರಾತ್ರಿ ಹಲವೆಡೆ ಭಿತ್ತಿಪತ್ರ ತೆರವುಗೊಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.