ವೇಮಗಲ್ ಪಟ್ಟಣದಲ್ಲಿ ಹಬ್ಬದ ಸಾಮಗ್ರಿ ಖರೀದಿ ಜೋರಾಗಿ ನಡೆಯಿತು
ವೇಮಗಲ್: ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ ಜೋರಾಗಿ ನಡೆದಿದೆ. ಖರೀದಿಯೂ ಭರಟೆಯೂ ಭರ್ಜರಿಯಾಗಿ ನಡೆಯಿತು.
ಹೂವು, ಹಣ್ಣು ದರ ಗಗನಕ್ಕೇರಿದೆ. ಕನಕಾಂಬರ ಹೂವಿಗೆ ಚಿನ್ನದ ಬೆಲೆ ಬಂದಿದೆ. ಮಲ್ಲಿಗೆ, ಸಂಪಿಗೆ, ಮಲ್ಲಿಗೆ ಹೂವು ಬೆಲೆ ಹೆಚ್ಚಾಗಿದೆ. ಸೇವಂತಿಗೆ ಹೂವಿನ ಬೆಲೆ ₹150ರಿಂದ 200ರವರೆಗೂ ಇತ್ತು. ಸೇಬು ಕೆ.ಜಿ.ಗೆ ₹150ರಿಂದ 180, ದ್ರಾಕ್ಷಿ ₹200, ಸೀತಾಫಲ ₹120, ದಾಳಿಂಬೆ ಕೆ.ಜಿ ₹120ಕ್ಕೆ ಮಾರಾಟವಾಯಿತು. ಬಾಳೆ ಕಂದು ₹50ಕ್ಕೆ ಒಂದು ಖರೀದಿ ನಡೆಯಿತು.
ತಾವರೆ ಹೂ ಒಂದರ ದರ ₹20 ರಿಂದ 30ಕ್ಕೆ ಏರಿಕೆಯಾಗಿದೆ. ದುಂಡು ಮಲ್ಲಿಗೆ ಹಾಗೂ ಕನಕಾಂಬರ, ರುದ್ರಾಕ್ಷಿ ಹೂವು, ಚಂಡು ಹೂವು, ಸೇವಂತಿಗೆ (ಹಳದಿ), ಸೇವಂತಿಗೆ (ಕೆಂಪು) ಬಿಡಿ ಹೂವು ಸೇವಂತಿ ಹಾಗೂ ಗುಲಾಬಿ, ತುಳಸಿ ಹಾರಗಳಿಗೆ ಭಾರಿ ಬೇಡಿಕೆ ಇತ್ತು
ಪಟ್ಟಣದ ಬಸ್ ನಿಲ್ದಾಣದಲ್ಲಿ ಕಿಕ್ಕಿರಿದಿದ್ದ ಜನ: ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಅಂಗಡಿಗಳಲ್ಲಿ ಹೂವು ಖರೀದಿಸಲು ಆಗಮಿಸಿದ್ದ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ, ನರಸಾಪುರ ರಸ್ತೆ ಸರ್ಕಲ್, ಸೀತಿ ಮುಖ್ಯ ರಸ್ತೆಗಳಲ್ಲಿ ಗ್ರಾಹಕರು ಕಿಕ್ಕಿರಿದು ಸೇರಿದ್ದರು.
ರೆಡಿಮೆಡ್ ಲಕ್ಷ್ಮಿಯರಿಗೆ ಡಿಮ್ಯಾಂಡ್: ಇತ್ತೀಚಿನ ವರ್ಷಗಳಲ್ಲಿ ಲಕ್ಷ್ಮಿ ಅಲಂಕರಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಹಲವರು ಸಿದ್ಧ ಲಕ್ಷ್ಮಿಯರನ್ನು ಖರೀದಿಸಿ ಮನೆಗೆ ಕರೆದೊಯ್ಯದರು. ಪುಟಾಣಿ ಲಕ್ಷ್ಮಿ ಮೂರ್ತಿಗಳು ₹2 ಸಾವಿರದಿಂದ ₹4 ಸಾವಿರವರೆಗೆ ಮಾರಾಟವಾಯಿತು.
ಖರೀದಿಗೆ ಮುಗಿಬಿದ್ದ ಗ್ರಾಹಕರು
ಮುಳಬಾಗಿಲು: ವರ ಮಹಾಲಕ್ಷ್ಮಿ ಹಬ್ಬದ ಪೂಜೆ ಹಾಗೂ ಅಲಂಕಾರಕ್ಕಾಗಿ ಹಣ್ಣು ಹಂಪಲು ವ್ಯಾಪಾರ ಜೋರಾಗಿ ನಡೆಯಿತು.
ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇಲ್ಲದೆ ರೈತರು ಹಾಕಿದ ಬಂಡವಾಳವೂ ಕೈಗೆ ಸೇರುತ್ತಿಲ್ಲ. ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಹಣ್ಣು, ಹೂವು ಮತ್ತಿತರರ ವಸ್ತುಗಳ ಬೆಲೆ ಗಗನಕ್ಕೆ ಏರಿದೆ.
ನಗರದ ಬಜಾರು ರಸ್ತೆ, ಡಿವಿಜಿ ವೃತ್ತ, ಕೆಇಬಿ ವೃತ್ತ, ಬೈಯಪ್ಪನಹಳ್ಳಿ ಹಾಗೂ ತಿಮ್ಮರಾವುತ್ತನಹಳ್ಳಿ ವೃತ್ತ ಮತ್ತಿತರರ ಕಡೆ ಹಬ್ಬದ ಪ್ರಯುಕ್ತ ನಾನಾ ಬಗೆ ಹಣ್ಣು, ಹೂವು, ಬಾಳೆ ಎಲೆ, ಮಾವಿನ ಎಲೆ, ಕಮಲದ ಹೂವು ಮತ್ತಿತರರ ವಸ್ತುಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಜಮಾಯಿಸಿದ್ದರು.
ಹೂವು, ಹಣ್ಣು ಭಾರಿ ದುಬಾರಿ
ಮಾಲೂರು: ವರಮಹಾ ಲಕ್ಷ್ಮಿಹಬ್ಬದ ಮುನ್ನಾದಿನವಾದ ಗುರುವಾರ ಪಟ್ಟಣದ ಮಾರುಕಟ್ಟೆ ಪ್ರದೇಶ ಖರೀದಿದಾರರಿಂದ ತುಂಬಿತ್ತು.
ಹೂವು, ಹಣ್ಣು, ಬಟ್ಟೆ ಹಾಗೂ ಹಬ್ಬದ ಸಾಮಗ್ರಿ ಖರೀದಿಸಲು ಸಾರ್ವಜನಿಕರು ಉತ್ಸಾಹ ತೋರಿದರು. ಕಳೆದ ಎರಡು ತಿಂಗಳಿಂದ ಯಾವುದೇ ಸಂಭ್ರಮಾಚರಣೆ ಇಲ್ಲದೆ ಮಂಕಾಗಿದ್ದ ಮಾರುಕಟ್ಟೆ, ಅಂಗಡಿ ಮುಂಗಟ್ಟು ಗುರುವಾರ ಗಿಜಿಗುಡುತ್ತಿದ್ದವು.
ಬೆಲೆ ಏರಿಕೆ: ಬೆಲೆ ಏರಿಕೆ ನಡುವೆ ಜನರು ಹಬ್ಬದ ವಸ್ತುಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದರು. ಗುಲಾಬಿ ಹೂವಿನ ಬೆಲೆ ಕೆಜಿಗೆ ₹500, ಚಂಡು ಹೂವು ₹200, ಕನಕಾಂಬರ 1 ಕೆಜಿಗೆ ₹2,500 ಸಾವಿರ, ಸುಗಂಧರಾಜ ₹350, ಮಲ್ಲಿಗೆ ₹2000 ಇತ್ತು. ಅದೇ ರೀತಿ ಸೇಬು ಹಣ್ಣಿನ ಬೆಲೆ ಕೆಜಿಗೆ ₹200, ದಾಳಿಂಬೆ ₹200, ಕಿತ್ತಳೆ ₹180, ಪಚ್ಚಬಾಳೆ ₹120, ಏಲಕ್ಕಿ ಬಾಳೆ ₹140, ಮೊಸಂಬಿ 110ಕ್ಕೆ ಮಾರಾಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.