ಕೋಲಾರ: ‘ಕೋವಿಡ್ ಸುರಕ್ಷತಾ ಮಾರ್ಗಸೂಚಿ ಪಾಲನೆ ಮೂಲಕ ಸೋಂಕಿನ ನಿಯಂತ್ರಣಕ್ಕೆ ಜನರು ಸಹಕರಿಸಬೇಕು. ಸೋಂಕಿನ ಪ್ರಕರಣಕ್ಕೆ ನಾವು ಹೊಣೆಗಾರರಾಗುವುದು ಬೇಡ. ಕೋವಿಡ್ ಮುಕ್ತ ಜಿಲ್ಲೆಗೆ ದೃಢ ಸಂಕಲ್ಪ ಮಾಡೋಣ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಕಿವಿಮಾತು ಹೇಳಿದರು.
ಇಲ್ಲಿ ಶನಿವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯಿಂದ ಕೊಡುಗೆಯಾಗಿ ನೀಡಿದ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್ ಸೇರಿದಂತೆ ವೈದ್ಯಕೀಯ ಪರಿಕರಗಳನ್ನು ಸ್ವೀಕರಿಸಿ ಮಾತನಾಡಿ, ‘ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಎಲ್ಲೆಡೆ ಕೋವಿಡ್ ಆತಂಕ ಹೆಚ್ಚಿದ್ದು, ಸಾರ್ವಜನಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು’ ಎಂದು ಸಲಹೆ ನೀಡಿದರು.
‘ಕೋವಿಡ್ 2ನೇ ಅಲೆ ತೀವ್ರವಾಗಿದೆ. ಸದ್ಯದಲ್ಲೇ 3ನೇ ಅಲೆ ಆರಂಭವಾಗುವ ಸಾಧ್ಯತೆ ಇದ್ದು, ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಆರೋಗ್ಯ ಹಾಗೂ ಅವರ ಮನಸ್ಥಿತಿ ಸಮತೋಲನ ಕಾಪಾಡಲು ಹೆಚ್ಚು ಗಮನಹರಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಸಂಘ ಸಂಸ್ಥೆಗಳು ಜಿಲ್ಲಾಡಳಿತದ ಜತೆ ಕೈಜೋಡಿಸಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಸಂಸ್ಥೆ ವತಿಯಿಂದ ನಗರ ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಸೂಚಿಸಿದ ರೋಗಿಗಳಿಗೆ ಅಗತ್ಯವಿದ್ದರೆ ಕನಿಷ್ಠ 5 ದಿನಗಳವರೆಗೆ ಉಚಿತವಾಗಿ ಆಮ್ಲಜನಕ ಸಾಂದ್ರಕಗಳನ್ನು ಕೊಡುತ್ತೇವೆ’ ಎಂದು ಭಾರತೀಯ ರೆಡ್ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಎನ್.ಗೋಪಾಲಕೃಷ್ಣಗೌಡ ಭರವಸೆ ನೀಡಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಾಧ್ಯಕ್ಷ ಆರ್.ಶ್ರೀನಿವಾಸನ್, ಕಾರ್ಯದರ್ಶಿ ಆರ್.ನಂದೀಶ್ಕುಮಾರ್, ಖಜಾಂಚಿ ಜಿ.ಶ್ರೀನಿವಾಸ್, ಸದಸ್ಯರಾದ ಎಸ್.ಸಿ.ವೆಂಕಟಕೃಷ್ಣಪ್ಪ, ವಿ.ಪಿ.ಸೋಮಶೇಖರ್, ವೆಂಕಟೇಶ್ಗೌಡ, ಶ್ರೀರಾಮರೆಡ್ಡಿ, ಸೀನಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.