ಕೋಲಾರ: ‘ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗಾಗಿ ಬಾಡಿಗೆ ಮನೆ, ಕಚೇರಿಗಾಗಿ ಹುಡುಕಾಟ ನಡೆದಿದೆ.
‘ಕ್ಷೇತ್ರದಿಂದ ಗೆದ್ದರೆ ಜನರ ಕೈಗೆ ಸಿದ್ದರಾಮಯ್ಯ ಸಿಗುವುದಿಲ್ಲ’ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಟೀಕಿಸಿದ ಬೆನ್ನಲೇ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಕ್ಷದ ಸ್ಥಳೀಯ ಮುಖಂಡರು ನಗರದ ಬೈಪಾಸ್ ರಸ್ತೆಯಲ್ಲಿಯೇ ಮನೆ, ಕಚೇರಿಗಾಗಿ ಶೋಧ ನಡೆಸಿದ್ದಾರೆ.
‘ಯಾರೋ ಟೀಕಿಸುತ್ತಾರೆ ಎಂಬ ಉದ್ದೇಶಕ್ಕೆ ಅಲ್ಲ; ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ದಿನದಿಂದಲೇ ನಾವು
ಹುಡುಕಾಟ ಆರಂಭಿಸಿದ್ದೇವೆ. ಉತ್ತಮ ಪಾರ್ಕಿಂಗ್ ವ್ಯವಸ್ಥೆ ಇರುವ ಮನೆ ಹಾಗೂ ಕಚೇರಿ ಬೇಕಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯೇ ನಾಲ್ಕೈದು ಮನೆ ನೋಡಿದ್ದು, ಇನ್ನೂ ಅಂತಿಮಗೊಂಡಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೋಲಾರ ಕ್ಷೇತ್ರವು ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಲ್ಲ ಎಂಬುದಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮೇಲೆ ಬಿದ್ದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಅವರಿಗೆ ದಿಢೀರ್ ಪ್ರೀತಿ ಹುಟ್ಟಲು ಕಾರಣವೇನು’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.