
ಕೆಜಿಎಫ್: ಜಯಂತಿಗಳು ಜಾಗೃತಿಯಾಗಬೇಕೇ ವಿನಃ ಜಾತ್ರೆಗಳಾಗಬಾರದು. ಜಯಂತಿಯ ಉದ್ದೇಶ ಎಲ್ಲರಿಗೂ ತಲುಪುವುದು ಮುಖ್ಯ ಎಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಹೇಳಿದರು.
ರಾಬರ್ಟಸನ್ಪೇಟೆಯಲ್ಲಿ ಶನಿವಾರ ಬೋವಿ ಸಮುದಾಯ ಏರ್ಪಡಿಸಿದ್ದ ಸಿದ್ದರಾಮ ಜಯಂತಿಯಲ್ಲಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಸಮಾಜವನ್ನು ತಿದ್ದಿ ತೀಡಿದವರು. ಸಿದ್ದರಾಮೇಶ್ವರರ ಅನುಯಾಯಿಗಳಾಗದ ನಾವು ಕುಣಿದು ಕುಪ್ಪಳಿಸಿ ಜಾತ್ರೆ ಮಾಡುತ್ತಿದ್ದೇವೆ. ಜಯಂತಿಗಳು ಜಾಗೃತಿ ತಾಣಗಳಾಗಬೇಕು ಎಂದರು.
ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಅಕ್ಷರ ಕ್ರಾಂತಿ ಬಹಳ ಮುಖ್ಯ. ಅಕ್ಷರದ ವಾರಸುದಾರರು ಆಡಳಿತ ಸೂತ್ರ ಹಿಡಿದಿದ್ದರು. ಅಕ್ಷರವಿಲ್ಲದವರು ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಹೇಳಿದರು.
ಗುಡಿ ಕಟ್ಟಿದವರಿಗೆ ಗುಡಿಯೊಳಗೆ ಬಿಡುತ್ತಿರಲಿಲ್ಲ. ನಮ್ಮ ಕಾಯಕವನ್ನು ಅಸಡ್ಡೆಯಾಗಿ ನೋಡುತ್ತಿದ್ದವರು ಈಗ ಎಲ್ಲಾ ಕಾಯಕವನ್ನು ಮಾಡುತ್ತಿದ್ದಾರೆ. ಕಾಯಕ ಇಂದು ಹಣ ಸಂಪಾದನೆಗೆ ಮೂಲವಾಗಿದೆ. ಸಮುದಾಯದವರು ಆರ್ಥಿಕ ಕ್ರಾಂತಿಯನ್ನು ಕೂಡ ಮಾಡಬೇಕು. ನಮ್ಮ ಇತಿಹಾಸವನ್ನು ನಾವೇ ಬರೆಯಬೇಕು. ಶೋಷಿತ ವರ್ಗದವರಿಗೆ ಶಾಪವಾಗಿರುವ ದುಶ್ಚಟದಿಂದ ನಾವು ದೂರವಿರಬೇಕು ಎಂದರು.
‘ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ತಮ್ಮ ಮಗಳನ್ನು ಶಾಸಕರನ್ನಾಗಿ ಮಾಡಬೇಕೆಂಬ ಆಸೆ ಇತ್ತು. ಅದನ್ನು ನೆರವೇರಿಸಿಕೊಂಡಿದ್ದಾರೆ. ನಮಗೂ ನಮ್ಮ ಸಮುದಾಯದವರು ಶಾಸಕರಾಗಬೇಕು ಎಂಬ ಆಸೆ ಇದೆ. ಅದು ಶೀಘ್ರ ಈಡೇರಲಿ’ ಎಂದು ಹೇಳಿದರು.
ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಶಾಸಕಿ ಎಂ.ರೂಪಕಲಾ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ವೆಂಕಟೇಶಪ್ಪ. ಗೋಪಾಲ್, ಚಲಪತಿ, ಬಾಬು, ನಾರಾಯಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.