ಕೆಜಿಎಫ್: ಸೌದಿ ಅರೇಬಿಯಾದಲ್ಲಿ ಕಳೆದ ತಿಂಗಳು ನಡೆದಿದ್ದ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ದಾಸರಹೊಸಹಳ್ಳಿಯ ಕೀರ್ತನಾ ಪಾಂಡ್ಯನ್ ಅವರನ್ನು ನಗರದ ಜೈನ್ ಕಾಲೇಜಿನಿಂದ ಶುಕ್ರವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ರೇಖಾ ಸೇಥಿ ಮಾತನಾಡಿ, ಕೀರ್ತನಾ ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಓದಿನ ಜೊತೆಗೆ ಕ್ರೀಡೆಯಲ್ಲಿ ಕೂಡ ಆಕೆ ಸಾಧನೆ ಮೆರೆದಿದ್ದಾರೆ. ಆಕೆಯ ವಿದ್ಯಾಭ್ಯಾಸ ಮತ್ತು ಕ್ರೀಡೆ ತರಬೇತಿಗೆ ಕಾಲೇಜಿನಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು.
ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿರುವುದರಿಂದ ಎರಡು ವರ್ಷಗಳ ಕಾಲ ಕೀರ್ತನಾಗೆ ಉಚಿತ ವಿದ್ಯಾಭ್ಯಾಸ ನೀಡುವುದಾಗಿ ಆಡಳಿತಾಧಿಕಾರಿ ಮಹೇಂದ್ರ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕೀರ್ತನಾ ಅವರ ತಂದೆ ಪಾಂಡ್ಯನ್ ಮತ್ತು ತಾಯಿ ಜಯಲಕ್ಷ್ಮೀ ಹಾಜರಿದ್ದರು. ಈ ಮುನ್ನ ಕಾಲೇಜಿಗೆ ಆಗಮಿಸಿದ ಕೀರ್ತನಾ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.