ಕೋಲಾರ: ‘ಕೆಲವು ಸಚಿವರು ಕಾಂಗ್ರೆಸ್ ಶಾಸಕರಿಗೇ ಸ್ಪಂದಿಸುತ್ತಿಲ್ಲ ಎನ್ನುವುದು ನಿಜ. ಅವರ ವಿರುದ್ಧ ದೂರುಗಳಿವೆ, ಈ ಬಗ್ಗೆ ನನಗೂ ಬೇಸರವಿದೆ. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಮನಕ್ಕೆ ತಂದಿದ್ದು ಕರೆದು ಮಾತನಾಡುವ ಭರವಸೆ ನೀಡಿದ್ದಾರೆ’ ಎಂದು ಮಾಲೂರು ಶಾಸಕ ಕಾಂಗ್ರೆಸ್ನ ಕೆ.ವೈ.ನಂಜೇಗೌಡ ತಿಳಿಸಿದರು.
ಮಂಗಳವಾರ ಟೇಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಬಿ.ಆರ್.ಪಾಟೀಲ ಸೇರಿದಂತೆ ಯಾರೂ ಪಕ್ಷಕ್ಕೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡಬಾರದು. ಸರ್ಕಾರ ಅಲ್ಲಾಡುತ್ತಿದೆ ಎನ್ನುವುದು ತಪ್ಪು. ಏನೇ ನೋವಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು’ ಎಂದರು.
‘ಸಚಿವ ಜಮೀರ್ ಅಹ್ಮದ್ ಎಲ್ಲಾ ಶಾಸಕರಿಗೆ ಗೌರವ ಕೊಡುತ್ತಾರೆ. ಅವರ ವಿಚಾರದಲ್ಲಿ ನನ್ನದು ಯಾವುದೇ ದೂರು ಇಲ್ಲ. ಹಣ ಕೊಟ್ಟು ಯಾವುದೇ ಕೆಲಸ ಮಾಡಿಸಿಕೊಂಡಿಲ್ಲ’ ಎಂದು ಹೇಳಿದರು.
‘ಅಸಮಾಧಾನಿತ ಶಾಸಕರನ್ನು ತಕ್ಷಣ ಕರೆದು ಹೈಕಮಾಂಡ್ ಮಾತನಾಡಬೇಕು. ನಮ್ಮ ಜಿಲ್ಲೆಗೆ ಅನುದಾನ ಬರುತ್ತಿದೆ. ಪ್ರತಿ ದಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಎಲ್ಲಾ ಶಾಸಕರಿಗೂ ಸಿಗುತ್ತಾರೆ. ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಚರ್ಚೆ ಮಾಡಿದರೆ ಒಳ್ಳೆಯದು’ ಎಂದು ತಿಳಿಸಿದರು.
‘ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಂದ ಜಿಲ್ಲೆಗೆ ಉತ್ತಮ ಸ್ಪಂದನೆ ಹಾಗೂ ಅನುದಾನ ಸಿಕ್ಕಿದೆ. ಬಿಜೆಪಿ ಸರ್ಕಾರದಲ್ಲಿ ನಮಗೆ ಅನುದಾನ ಸಿಗುತ್ತಿರಲಿಲ್ಲ. ಮಾಲೂರು ಕ್ಷೇತ್ರಕ್ಕೆ ಇತಿಹಾಸದಲ್ಲಿ ಇಷ್ಟೊಂದು ಅನುದಾನ ಸಿಕ್ಕಿರಲಿಲ್ಲ. ಸರ್ಕಾರದ ಬಗ್ಗೆ ತೃಪ್ತಿ ಇದೆ. ಗ್ಯಾರಂಟಿ ಯೋಜನೆಗಳು ಸಹ ಅಭಿವೃದ್ಧಿ ಕೆಲಸಗಳು ಅಲ್ಲವೇ?’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.