ಕೋಲಾರ: ತಾಲ್ಲೂಕಿನ ಮುದುವಾಡಿ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ನೆನಪಿಗಾಗಿ ಶಾಲಾ ಆವರಣದಲ್ಲಿ ಬುಧವಾರ ಹಣ್ಣಿನ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಮಕ್ಕಳು ತಾವೇ ಖರೀದಿಸಿ ತಂದ ಸೀಬೆ, ದಾಳಿಂಬೆ, ನೇರಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಶಾಲಾ ಆವರಣದಲ್ಲಿ ನೆಟ್ಟರು.
‘ಇದೊಂದು ಅಪರೂಪದ ಕ್ಷಣ. ಅನೇಕ ಶಾಲೆಗಳಲ್ಲಿ ಶಾಲೆ ಬಿಟ್ಟು ತೇರ್ಗಡೆಯಾಗಿ ಹೋಗುವ ಮಕ್ಕಳು ಶಾಲೆಗೆ ಕೊಡುಗೆ ನೀಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ. ನಮ್ಮ ಶಾಲೆಯ ಮಕ್ಕಳು ಹಣ್ಣಿನ ಗಿಡಗಳನ್ನು ಶಾಲೆ ಆವರಣದಲ್ಲಿ ನೆಟ್ಟು ಹೋಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ’ ಎಂದು ಶಿಕ್ಷಕ ಆಂಜನೇಯ ಮೆಚ್ಚುಗೆ ವ್ಯಕ್ತಪಡಿಸಿದರು.
‘ವಿದ್ಯಾರ್ಥಿಗಳು ತಮ್ಮ ಸವಿ ನೆನಪಿಗಾಗಿ ಶಾಲೆಗೆ ಕೊಟ್ಟ ಇತರೆ ಕೊಡುಗೆಗಳು ಹಲವು ದಿನಗಳ ನಂತರ ನಾಶವಾಗಬಹುದು. ಆದರೆ, ಅವರು ನೆಟ್ಟಿರುವ ಗಿಡಗಳು ದೊಡ್ಡದಾಗಿ ಹಣ್ಣು ಮತ್ತು ನೆರಳು ನೀಡುವ ಮೂಲಕ ಸಾವಿರಾರು ಮಕ್ಕಳಿಗೆ ಆಸರೆಯಾಗಿ ನಿಲ್ಲಲಿವೆ. ಜತೆಗೆ ಶಾಲೆ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣಕ್ಕೂ ಸಹಕಾರಿಯಾಗಲಿವೆ’ ಎಂದು ಅಭಿಪ್ರಾಯಪಟ್ಟರು.
ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.