
ಕೋಲಾರದಲ್ಲಿ ಶುಕ್ರವಾರ ನಡೆದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ತಲಕಾಡು ಚಿಕ್ಕರಂಗೇಗೌಡ, ಕೆ.ಸಿ.ರಾಜಣ್ಣ, ಎಸ್.ಚಿನ್ನ, ಸುರೇಶ್ ಗೌತಮ್, ದೀಕ್ಷಿತ್ ಹಾಗೂ ಪದಾಧಿಕಾರಿಗಳು ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು
ಕೋಲಾರ: ಪೇಶ್ವೆಗಳು 1791ರಲ್ಲಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ ರಕ್ಷಣೆ ಕೊಡಿಸಿದ್ದು ಟಿಪ್ಪು ಸುಲ್ತಾನ್. ಹೀಗಾಗಿ, ಆ ಮಠ ಉಳಿಯಿತು. ಟಿಪ್ಪು ಸುಮ್ಮನಿದ್ದಿದ್ದರೆ ಈ ಮಠ ಸರ್ವನಾಶ ಆಗಿರುತಿತ್ತು. ಶೃಂಗೇರಿ ಮಠ ಇಲ್ಲದಿದ್ದರೆ ಹಿಂದೂ ಪರಂಪರೆ ಇರುತ್ತಿರಲಿಲ್ಲ. ಈ ಬಗ್ಗೆ ಮಠದಲ್ಲಿಯೇ ದಾಖಲೆಗಳಿವೆ ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಪ್ರತಿಪಾದಿಸಿದರು.
ನಗರದ ನಚಿಕೇತನ ನಿಲಯದ ಆವರಣದಲ್ಲಿ ಶುಕ್ರವಾರ ಬಹುಜನ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ 275ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಟಿಪ್ಪುವಿನ ಕುರಿತು ಯಾರೂ ದೀರ್ಘವಾಗಿ ಅಧ್ಯಯನ ಮಾಡಿಲ್ಲ. ಬದಲಾಗಿ ಹಾದಿಬೀದಿಯಲ್ಲಿ ಹೋಗುವವರೆಲ್ಲಾ ಮಾತನಾಡುತ್ತಾರೆ. ತಪ್ಪು ಹೇಳಿ ಹೇಳಿ ಹೀಗೆಯೇ ಮುಂದುವರಿದಿದೆ. ಅದಕ್ಕೆ ಈಗ ರಾಜಕಾರಣ ಸೇರಿಕೊಂಡಿದೆ. ಸುಳ್ಳು ಬೇಗ ಬೆಳಕಿಗೆ ಬರುತ್ತದೆ. ಆದರೆ, ಸತ್ಯ ನಿಧಾನವಾಗಿ ಹೊರಬರುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಟಿಪ್ಪುವಿಗೆ ಗೌರವ ಕೊಟ್ಟಿದ್ದಾರೆ ಎಂದರು.
ಮೊದಲ ಬಾರಿ ಬ್ರಿಟಿಷರನ್ನು ಸೋಲಿಸಿದ್ದು ಹೈದರಾಲಿ. ಆ ಮುನ್ನ ಬ್ರಿಟಿಷರು ಯಾರಿಗೂ ತಲೆಬಾಗಿರಲಿಲ್ಲ. 1980ರಲ್ಲಿ ನಡೆದ ಯುದ್ಧದಲ್ಲೂ ಬಿಟಿಷ್ ಸೈನ್ಯ ಸೋಲುತ್ತದೆ. ಬ್ರಿಟಿಷ್ ಅಧಿಕಾರಿಯನ್ನು ಮೊದಲ ಬಾರಿ ಜೈಲಿಗೆ ತಳ್ಳಿದ್ದು ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಎಂದು ಶ್ಲಾಘಿಸಿದರು.
ಟಿಪ್ಪು ಆಡಳಿತದ 17 ವರ್ಷಗಳಲ್ಲಿ ಅಭಿವೃದ್ಧಿಯ ದೊಡ್ಡ ಕ್ರಾಂತಿಯೇ ನಡೆದು ಹೋಯಿತು. ಸಾಕಷ್ಟು ಆಡಳಿತ ಸುಧಾರಣೆ ಮಾಡಿದರು. ಭೂಸುಧಾರಣಾ ಕಾಯ್ದೆ ತಂದು ದುಡಿಯುವ ವರ್ಗಕ್ಕೆ ಭೂಮಿ ಕಲ್ಪಿಸಿದರು. ದಲಿತರು ಹಾಗೂ ರೈತರಿಗೆ ನೆರವಾದರು. ಹೀಗಾಗಿ, ಟಿಪ್ಪು ಅನ್ನದಾತ ಕೂಡ. ಅದರಿಂದ ಸ್ಫೂರ್ತಿ ಪಡೆದು, ಭೂಸುಧಾರಣಾ ಕಾಯ್ದೆಯನ್ನು ಇಂದಿರಾ ಗಾಂಧಿ ಇಡೀ ದೇಶಕ್ಕೆ ವಿಸ್ತರಿಸಿದ್ದು ಎಲ್ಲರಿಗೂ ಗೊತ್ತೇ ಇದೆ ಎಂದು ಹೇಳಿದರು.
ಟಿಪ್ಪು ಫ್ರಾನ್ಸ್ನಿಂದ ವಿಜ್ಞಾನಿಗಳನ್ನು ಕರೆಸಿದರು. ಹೊಸಹೊಸ ತಂತ್ರಜ್ಞಾನ ತಂದರು. ರೇಷ್ಮೆ ಬೆಳೆಯನ್ನು ಮೈಸೂರು ರಾಜ್ಯಕ್ಕೆ ಪರಿಚಯಿಸಿದರು. ಕೈಗಾರಿಕಾ ಕ್ರಾಂತಿ ಮಾಡಿದರು. ರಾಕೆಟ್ ಕಂಡು ಹಿಡಿಯಲು ಕಾರಣರಾದರು. ಅಮೆರಿಕದ ನಾಸಾದ ಕಚೇರಿಯಲ್ಲಿ ಮೈಸೂರು ಸಂಸ್ಥಾನದ ಅವಧಿಯಲ್ಲಿ ರಾಕೆಟ್ ಪ್ರಯೋಗದ ಫೋಟೊವಿದೆ ಎಂದರು.
ಟಿಪ್ಪು ಅವರಿಂದ ಅತಿರೇಕದ ವರ್ತನೆ ನಡೆದಿಲ್ಲ. ಆದರೆ, ಲೋಪದೋಷ ನಡೆದಿದೆ. ಟಿಪ್ಪು ಹೆಸರಿನಲ್ಲಿ ಮೀರ್ ಗುಲಾಮ್ ಅಲಿ ಎಂಬಾತ ತಪ್ಪು ಆದೇಶಗಳನ್ನು ಮಾಡಿದ ಎಂಬ ದಾಖಲೆಗಳಿವೆ. ಎಲ್ಲೂ ಟಿಪ್ಪು ಸುಲ್ತಾನ್ ಉದ್ದೇಶಪೂರ್ವಕವಾಗಿ ತಪ್ಪು ಮಾಡಿಲ್ಲ. ಅವರು ಯಾವ ದೇಗುಲ ಒಡೆದಿದ್ದಾನೆ ಎಂಬುದಕ್ಕೆ ಪಟ್ಟಿಕೊಡಿ ಎಂದು ಸವಾಲು ಹಾಕಿದರು.
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಮಾತನಾಡಿ, 'ಟಿಪ್ಪು ಕ್ರೂರಿ, ಮತಾಂಧ ಎಂದೆಲ್ಲಾ ಸುಳ್ಳು ಹಬ್ಬಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯದವರು ಸೇರಿದಂತೆ ಹಿಂದೂ, ಮುಸ್ಲಿಮರಲ್ಲೂ ಆ ಗೊಂದಲವನ್ನು ತುಂಬಿದ್ದಾರೆ. ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡರು ಇತಿಹಾಸವನ್ನು ಎಳೆಎಳೆಯಾಗಿ ತೆರೆದಿಟ್ಟು ಅನುಮಾನ, ಗೊಂದಲಗಳನ್ನು ಬಗೆಹರಿಸಿದ್ದಾರೆ' ಎಂದರು.
ಬಹುಜನ ವಿಚಾರ ವೇದಿಕೆ ಅಧ್ಯಕ್ಷ ಎಸ್.ಚಿನ್ನ, ಪ್ರಾಧ್ಯಾಪಕ ಸುರೇಶ್ ಗೌತಮ್, ಎಸ್.ದೀಕ್ಷಿತ್, ವೇದಿಕೆ ಪದಾಧಿಕಾರಿಗಳು ಇದ್ದರು
Quote - ಟಿಪ್ಪು ತನ್ನ ಆಡಲಿತದಲ್ಲಿ ಪರ್ಷಿಯನ್ ಭಾಷೆ ಜಾರಿ ಮಾಡಿದ ಎಂಬ ಆರೋಪವಿದೆ. ಆದರೆ ಟಿಪ್ಪು ಜನಿಸುವ 50 ವರ್ಷಗಳ ಮೊದಲೇ ಪರ್ಷಿಯನ್ ಭಾಷೆ ಇತ್ತು. ಆ ಭಾಷೆ ಜಾರಿ ಮಾಡಿದ್ದು ಟಿಪ್ಪು ಅಲ್ಲ ತಲಕಾಡು ಚಿಕ್ಕರಂಗೇಗೌಡ ಇತಿಹಾಸ ತಜ್ಞ
ಟಿಪ್ಪು ಚಪ್ಪಲಿಯಿಂದ ಬ್ರಿಟನ್ ರಾಣಿಗೆ ಹಣ!
ಬ್ರಿಟನ್ನಲ್ಲಿ ಪ್ರಸಿದ್ಧ ಮ್ಯೂಸಿಯಂ ಇದ್ದು ಅದರ ಒಂದು ಕೋಣೆಯನ್ನು ಟಿಪ್ಪುವಿಗೆ ಸಂಬಂಧಿಸಿದ ವಸ್ತುಗಳಿಗೆ ಮೀಸಲಿಡಲಾಗಿದೆ. ಅದು ವಿಶ್ವದಾದ್ಯಂತ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಪ್ರವೇಶ ಶುಲ್ಕ ಹೆಚ್ಚು ಸಂಗ್ರಹವಾಗುತ್ತಿದೆ. ಆ ಕೋಣೆಯ ಗ್ಯಾಲರಿಯಲ್ಲಿ ಟಿಪ್ಪುವಿನ ಚಪ್ಪಳಿಯನ್ನು ಕೂಡ ಪ್ರದರ್ಶನಕ್ಕಿಡಲಾಗಿದೆ. ಪ್ರವೇಶ ಶುಲ್ಕವು ಬ್ರಿಟನ್ ರಾಣಿಗೆ ಹೋಗುತ್ತದೆ. ಈ ಕುರಿತು ಲೇಖನ ಕೂಡ ಬರೆದಿದ್ದೇನೆ ಎಂದು ತಲಕಾಡು ಚಿಕ್ಕರಂಗೇಗೌಡ ಹೇಳಿದರು.
‘ಕರ್ನಾಟಕ’ ಹೆಸರಿಟ್ಟಿದ್ದು ಗಂಗರು
ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜು ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಅಷ್ಟೆ. ಮೂಲವಾಗಿ 1634ರಲ್ಲಿಯೇ ಕೋಲಾರದ ಗಂಗರ ದೊರೆ ಭೂವಿಕ್ರಮ ಎಂಬುವರು ಕರ್ನಾಟಕವೆಂದು ಹೆಸರಿಟ್ಟಿದ್ದರು. ಕೋಲಾರ ಬೆದನೂರು ಎಂಬ ಶಾಸನದಲ್ಲಿ ಆ ಪುರಾವೆ ಇದೆ. ಆದರೆ 1973ರಲ್ಲಿ ನಾಮಕಾರಣ ಮಾಡಲಾಯಿತು ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಚಿಕ್ಕರಂಗೇಗೌಡ ತಿಳಿಸಿದರು.
ಇತಿಹಾಸ ಅಕಾಡೆಮಿ ಆರಂಭಿಸಲು ಒತ್ತಾಯ
ರಾಜ್ಯದಲ್ಲಿ ಜಾನಪದ ನೃತ್ಯ ನಾಟಕ ಸೇರಿದಂತೆ ಎಲ್ಲಾ ವಿಚಾರಗಳಿಗೂ ಅಕಾಡೆಮಿಗಳಿವೆ. ಆದರೆ ಇತಿಹಾಸ ವಿಷಯಕ್ಕೆಂದು ಅಧಿಕೃತವಾದ ಅಕಾಡೆಮಿ ರಚಿಸಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಸೇರಿದಂತೆ ಇತಿಹಾಸದ ಹಲವು ವಿಚಾರಗಳಲ್ಲಿ ಸರ್ಕಾರ ಸಾರ್ವಜನಿಕರಿಂದ ಸುಳ್ಳು ಮಾಹಿತಿಗಳು ರವಾನೆಯಾಗುತ್ತಿವೆ ಎಂದು ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಕಳವಳ ವ್ಯಕ್ತಪಡಿಸಿದರು. ಇತಿಹಾಸಕ್ಕೆ ಸಂಬಂಧಿಸಿದ ತಪ್ಪುಗಳನ್ನು ತಡೆಯಲು ಇತಿಹಾಸ ಅಕಾಡೆಮಿ ರಚಿಸಬೇಕು. ಈವರೆಗೆ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.