ADVERTISEMENT

ಕೋಲಾರದಲ್ಲಿ ನಗರದಲ್ಲಿ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದವರಿಗೆ ನಗರಸಭೆಯಿಂದ ದಂಡ

ಅಧಿಕಾರಿಗಳ ಜತೆ ವಾಗ್ವಾದ: ಪ್ರಕರಣ ದಾಖಲಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:39 IST
Last Updated 7 ಜುಲೈ 2020, 14:39 IST
ಕೋಲಾರದಲ್ಲಿ ಮಂಗಳವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು.
ಕೋಲಾರದಲ್ಲಿ ಮಂಗಳವಾರ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ ಬೈಕ್‌ ಸವಾರರಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದರು.   

ಕೋಲಾರ: ನಗರದ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಮುಖಗವಸು (ಮಾಸ್ಕ್‌) ಧರಿಸದೆ ಓಡಾಡುತ್ತಿದ್ದ ಜನರಿಗೆ ಶಿಸ್ತುಕ್ರಮದ ಬಿಸಿ ಮುಟ್ಟಿಸಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಸಾಕಷ್ಟು ಮಂದಿ ಈ ಆದೇಶ ಉಲ್ಲಂಘಿಸಿ ಮಾಸ್ಕ್‌ ಧರಿಸಿದೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದರು.

ಹೀಗಾಗಿ ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಅಮ್ಮವಾರಿಪೇಟೆ, ಚಂಪಕ್ ವೃತ್ತ, ಎಂ.ಜಿ.ರಸ್ತೆ, ಮೆಕ್ಕೆ ವೃತ್ತ, ಎಂ.ಬಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಜನರನ್ನು ತಡೆದು ಮಾಸ್ಕ್‌ ಧರಿಸದಿರುವ ಬಗ್ಗೆ ತಪಾಸಣೆ ಮಾಡಿದರು.

ADVERTISEMENT

ಬೈಕ್‌ ಹಾಗೂ ಕಾರುಗಳಲ್ಲಿ ಹೋಗುತ್ತಿದ್ದ ಸಾಕಷ್ಟು ಮಂದಿ ಮಾಸ್ಕ್‌ ಧರಿಸಿರಲಿಲ್ಲ. ಅವರಿಗೆ ಅಧಿಕಾರಿಗಳು ಸ್ಥಳದಲ್ಲೇ ತಲಾ ₹ 100ರಿಂದ ₹ 500ರವರೆಗೆ ದಂಡ ವಿಧಿಸಿದರು. ಈ ವೇಳೆ ಕೆಲ ಬೈಕ್‌ ಸವಾರರು ದಂಡ ಕಟ್ಟಲು ನಿರಾಕರಿಸಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಬಳಿಕ ಅಧಿಕಾರಿಗಳು ಆ ಬೈಕ್ ಸವಾರರ ವಾಹನದ ನೋಂದಣಿ ಸಂಖ್ಯೆಯ ವಿವರ ಮತ್ತು ಫೋಟೊ ತೆಗೆದುಕೊಂಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದರು. ನಗರದಲ್ಲಿ ಮಂಗಳವಾರ ಸಂಜೆ ಕೇವಲ ನಾಲ್ಕೈದು ತಾಸಿನಲ್ಲಿ 55 ಮಂದಿಯಿಂದ ಸುಮಾರು ₹ 6,500 ದಂಡ ಸಂಗ್ರಹಿಸಲಾಯಿತು.

ಮಾರ್ಗಸೂಚಿ: ‘ಕೊರೊನಾ ಸೋಂಕು ತಡೆಗೆ ಸರ್ಕಾರ ಜಾರಿಗೊಳಿಸಿರುವ ಸುರಕ್ಷತಾ ಮಾರ್ಗಸೂಚಿಯನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದೇವೆ. ಮಾಸ್ಕ್‌ ಧರಿಸಿದವರ ಮತ್ತು ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದವರ ವಿರುದ್ಧದ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್‌ ಸುದ್ದಿಗಾರರಿಗೆ ತಿಳಿಸಿದರು.

‘ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ₹ 500 ಮತ್ತು ಮಾರುಕಟ್ಟೆಗಳಲ್ಲಿ ಅಥವಾ ಅಂಗಡಿಗಳ ಬಳಿ ಅಂತರ ಕಾಯ್ದುಕೊಳ್ಳದಿದ್ದರೆ ₹ 500 ದಂಡ ವಿಧಿಸುತ್ತೇವೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸುರಕ್ಷತಾ ಮಾರ್ಗಸೂಚಿ ರೂಪಿಸಿದ್ದು, ಇದನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಹೇಳಿದರು.

ನಗರಸಭೆ ಕಂದಾಯ ನಿರೀಕ್ಷಕ ತ್ಯಾಗರಾಜ್‌, ಆರೋಗ್ಯ ನಿರೀಕ್ಷಕ ಪುನೀತ್‌, ಕರ ವಸೂಲಿಗಾರ ಸುಮಂತ್‌, ಕಂದಾಯ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.