
ಕೆಜಿಎಫ್: ಒಂದೇ ಸಂಖ್ಯೆ ಹಾಕಿಕೊಂಡು ಎರಡು ಬಸ್ ಚಾಲನೆ ಮಾಡುತ್ತಿದ್ದವರನ್ನು ಸಾರಿಗೆ ಅಧಿಕಾರಿಗಳು ಪತ್ತೆ ಹಚ್ಚಿ, ಎರಡು ಬಸ್ಗಳನ್ನು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಆಂಧ್ರದ ವಿ.ಕೋಟೆಯಿಂದ ಬೇತಮಂಗಲ ಮಾರ್ಗವಾಗಿ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಎರಡು ಬಸ್ಗಳು ಒಂದೇ ಸಂಖ್ಯೆಯನ್ನು ಹೊಂದಿವೆ ಎಂಬ ಮಾಹಿತಿ ಮೇರೆಗೆ ಇಲಾಖೆ ಇನ್ಸ್ಪೆಕ್ಟರ್ಗಳಾದ ಮುನಿಕೃಷ್ಣ ಮತ್ತು ಪೂಜಾ ಅವರು ವಾಹನ ಪಡೆದು ಪರಿಶೀಲನೆ ನಡೆಸಿದರು. ಒಂದು ಬಸ್ ಕೇರಳ ಮೂಲದ್ದಾಗಿದ್ದು, ಮತ್ತೊಂದು ಬಸ್ ರಾಜ್ಯದಲ್ಲಿ ನೋಂದಣಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಂಟಿ ಸಾರಿಗೆ ಆಯುಕ್ತೆ ಗಾಯತ್ರಿ ದೇವಿ ತಿಳಿಸಿದ್ದಾರೆ.
ಬಸ್ ವಶಕ್ಕೆ ಪಡೆದಾಗ ಅವುಗಳ ಚಾಲಕರು ಸಾರಿಗೆ ಇಲಾಖೆ ನೋಟಿಸ್ಗೆ ಸಹಿ ಹಾಕಲು ನಿರಾಕರಿಸಿ, ಓಡಿ ಹೋಗಿದ್ದಾರೆ. ಬಸ್ಗಳ ಮಾಲೀಕರನ್ನು ಪತ್ತೆ ಹಚ್ಚಲಾಗುವುದು. ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡುವ ಕೃತ್ಯ ಇದಾಗಿದೆ. ತಪಾಸಣೆ ನಡೆಸಿದ ಬಳಿಕ ಮಾಲೀಕರ ಮೇಲೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಥಮಿಕ ಹಂತದಲ್ಲಿ ಬಸ್ ಮಾಲೀಕನನ್ನು ಪತ್ತೆ ಹಚ್ಚಿ, ಆತನಿಗೆ ನೋಟಿಸ್ ನೀಡಲಾಗುವುದು. ನಂತರ ಸಮರ್ಪಕ ಉತ್ತರ ಬಾರದೆ ಇದ್ದಾಗ, ಅವುಗಳನ್ನು ಮುಟ್ಟುಗೋಲು ಹಾಕಲಾಗುವುದು. ನ್ಯಾಯಾಲಯದ ಸೂಚನೆ ಮೇರೆಗೆ ವಶಪಡಿಸಿಕೊಂಡ ಬಸ್ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇದೇ ರೀತಿ ಎರಡು ವರ್ಷದ ಹಿಂದೆ ಸಾರಿಗೆ ಇಲಾಖೆ ವಶಪಡಿಸಿಕೊಂಡ ಬಸ್ಗಳನ್ನು ನ್ಯಾಯಾಲಯ ಅನುಮತಿ ನೀಡಿದರೆ ಹರಾಜು ಹಾಕಲಾಗುವುದು ಎಂದು ತಿಳಿಸಿದರು.
ಅಕ್ರಮವಾಗಿ ಚಲಿಸುವ ಇಂತಹ ಬಸ್ಗಳಿಂದ ಸಾರ್ವಜನಿಕರು ತೊಂದರೆಗೆ ಈಡಾಗುತ್ತಿದ್ದಾರೆ. ಅಪಘಾತ ಸಂಭವಿಸಿದರೆ ಅವರಿಗೆ ವಿಮೆ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಇಂತಹ ಬಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ಬೈಕ್ ಓಡಿಸುವ ದೂರುಗಳು ಸಾಕಷ್ಟು ಬಂದಿವೆ. ಪೊಲೀಸರ ಜೊತೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಬೈಕ್ ಓಡಿಸುವ ಮಕ್ಕಳ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಜೇಂದ್ರ ಬಾಬು ಮಾತನಾಡಿ, ಒಂದು ವಾರದಿಂದ ಇಲಾಖೆಯು ಹೆಲ್ಮೆಟ್ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 185 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದಂಡವನ್ನು ಕೂಡ ವಸೂಲಿ ಮಾಡಲಾಗಿದೆ. ಹೆಲ್ಮೆಟ್ ಧರಿಸುವುದರ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.