ADVERTISEMENT

ಬೈಕ್ ರ‍್ಯಾಲಿ: ಕಾಂಗ್ರೆಸ್‌ಗೆ ಸೆಡ್ಡು

‘ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯಲಾರರು’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:36 IST
Last Updated 15 ನವೆಂಬರ್ 2022, 5:36 IST
ಕೋಲಾರ ತಾಲ್ಲೂಕಿನ ವೇಮಗಲ್‌ನಿಂದ ಸೀತಿ-ಮದ್ದೇರಿ-ರಾಜಕಲ್ಲಹಳ್ಳಿವರೆಗೆ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಹಾಗೂ ಬೆಂಬಲಿಗರು ಬೈಕ್‌ ರ‍್ಯಾಲಿ ನಡೆಸಿದರು
ಕೋಲಾರ ತಾಲ್ಲೂಕಿನ ವೇಮಗಲ್‌ನಿಂದ ಸೀತಿ-ಮದ್ದೇರಿ-ರಾಜಕಲ್ಲಹಳ್ಳಿವರೆಗೆ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಹಾಗೂ ಬೆಂಬಲಿಗರು ಬೈಕ್‌ ರ‍್ಯಾಲಿ ನಡೆಸಿದರು   

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಮಿಂಚಿನ ಸಂಚಲನ ಸೃಷ್ಟಿಸಿದರೆ, ಮಾಜಿ ಸಚಿವ, ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆರ್‌.ವರ್ತೂರು ಪ್ರಕಾಶ್‌ ಬೈಕ್‌ ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶಿಸಿದರು.

‘ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವವ ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ. ಅದನ್ನು ಸಮುದಾಯದವರೂ ಒಪ್ಪುವುದಿಲ್ಲ. ನಾನೂ ಕುರುಬ ಸಮಾಜದವನೇ’ ಎಂದು ವರ್ತೂರು ಪ್ರಕಾಶ್‌ ಎಂದು ಹೇಳಿದರು.

ವೇಮಗಲ್‌ನಿಂದ ಸೀತಿ-ಮದ್ದೇರಿ-ರಾಜಕಲ್ಲಹಳ್ಳಿವರೆಗೆ ಬೃಹತ್ ಬೈಕ್‌ ರ‍್ಯಾಲಿ ನಡೆಸಿ ಕಾಂಗ್ರೆಸ್‌ಗೆ ಸೆಡ್ಡೊಡೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹಲವು ಸಮುದಾಯಗಳ ಮುಖಂಡರು ಬಿಜೆಪಿ ಸೇರ್ಪಡೆಯಾದರು.

ADVERTISEMENT

‘ಕೆ.ಆರ್‌.ರಮೇಶ್‌ ಕುಮಾರ್, ಎಸ್‍.ಎನ್.ನಾರಾಯಣಸ್ವಾಮಿ ಹಾಗೂ ಇತರರು ಸೋಲಿನ ಭಯದಿಂದ ಸಿದ್ದರಾಮಯ್ಯ ಅವರನ್ನು ಬರುವಂತೆ ಗೋಗರೆಯುತ್ತಿದ್ದಾರೆ. ಆದರೆ, ಈವರೆಗೆ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ’ ಎಂದರು.

‘ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ. ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವಂತೆ ಕೋಲಾರಕ್ಕೂ ಬಂದಿದ್ದಾರೆ ಅಷ್ಟೆ. ಅವರದ್ದೇ ಸಮುದಾಯದ ನಾನಿರುವು ವಿಚಾರ ಅವರಿಗೆ ಗೊತ್ತಿದೆ’ ಎಂದು
ತಿಳಿಸಿದರು.

‘ಬಿಜೆಪಿಯಿಂದ ಮಾತ್ರವೇ ರೈತರು ಮತ್ತು ಗ್ರಾಮೀಣಾಭಿವೃದ್ಧಿ ಸಾಧ್ಯ. ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರ ₹ 4 ಸಾವಿರ ಸೇರಿ ₹ 10 ಸಾವಿರ ಹಾಕುತ್ತಿದೆ. ಈ ಕೆಲಸ ಮಾಡಲು ಬೇರೆ ಪಕ್ಷಗಳಿಂದ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದಾಗ ಸಿಮೆಂಟ್ ರಸ್ತೆ ಕಾಮಗಾರಿಗಳಿಗೆ ಅನುದಾನ ನೀಡಿದ್ದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ. ಶಾಸಕ ಕೆ.ಶ್ರೀನಿವಾಸಗೌಡ ಏನಾದರೂ ಒಂದು ಕೆಲಸ ಮಾಡಿದ್ದಾರೆಯೇ? ನಾನು ನುಡಿದಂತೆ ನಡೆಯುವೆ’ ಎಂದು
ತಿಳಿಸಿದರು.

‌‌ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಬೆಗ್ಲಿ ಪ್ರಕಾಶ್, ರೂಪಶ್ರೀ, ಮಂಜುನಾಥ್, ಅರುಣ್ ಪ್ರಸಾದ್, ಸಿ.ಡಿ.ರಾಮಚಂದ್ರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.