ADVERTISEMENT

ಕಾಡುಪ್ರಾಣಿ ಕಾಟ; ಬೆಳೆಗೆ ಸೀರೆ ಕವಚ!

ಪ್ಲಾಸ್ಟಿಕ್‌ ಬಲೆ ಖರೀದಿಸಲು ಹಣವಿಲ್ಲದೆ ರೈತನ ಪರ್ಯಾಯ ಕ್ರಮ

ಕೆ.ಓಂಕಾರ ಮೂರ್ತಿ
Published 15 ಸೆಪ್ಟೆಂಬರ್ 2025, 6:41 IST
Last Updated 15 ಸೆಪ್ಟೆಂಬರ್ 2025, 6:41 IST
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ರೈತರೊಬ್ಬರು ರಾಗಿ ಬೆಳೆದಿದ್ದು, ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜಮೀನು ಸುತ್ತ ಸೀರೆ ಕಟ್ಟಿರುವುದು
ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮದ ಬಳಿ ರೈತರೊಬ್ಬರು ರಾಗಿ ಬೆಳೆದಿದ್ದು, ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜಮೀನು ಸುತ್ತ ಸೀರೆ ಕಟ್ಟಿರುವುದು    

ಕೋಲಾರ: ಕಷ್ಟಪಟ್ಟು ಬೆಳೆದಿರುವ ಬೆಳೆಗಳು ಕಾಡುಪ್ರಾಣಿಗಳ ಪಾಲಾಗುತ್ತಿದ್ದು, ಬಡ ರೈತರು ತಮ್ಮ ಹೊಲಗಳಿಗೆ ರಕ್ಷಣೆ ಒದಗಿಸಲು ಸೀರೆಗಳ ಕವಚದ ಮೊರೆ ಹೋಗಿರುವುದು ಕಂಡುಬಂದಿದೆ.

ತಾಲ್ಲೂಕಿನ ತೊಟ್ಲಿ ಗ್ರಾಮದ ರೈತರೊಬ್ಬರು ರಾಗಿ ಬೆಳೆದಿದ್ದು ಕಾಡು ಹಂದಿಗಳು, ಜಿಂಕೆಗಳಿಂದ ಬೆಳೆ ರಕ್ಷಿಸಿಕೊಳ್ಳಲು ಹೊಲದ ಸುತ್ತ ಸೀರೆ ಕವಚ ರಚಿಸಿಕೊಂಡಿದ್ದಾರೆ.

ರೈತ ನರಸಿಂಹ ಎಂಬುವರ 1 ಎಕರೆ 10 ಕುಂಟೆ ಜಮೀನು ಕಾಡಂಚಿನ ಪ್ರದೇಶದಲ್ಲಿದೆ. ಕಳೆದ ವರ್ಷ ಕಾಡುಹಂದಿಗಳು ಹಾಗೂ ಜಿಂಕೆಗಳು ನುಗ್ಗಿ ಬೆಳೆ ತಿಂದು ಹಾಕಿದ್ದವು. ಹೀಗಾಗಿ, ಅವರು ಈಚೆಗೆ ಕೋಲಾರದ ಅಂಗಡಿಗಳಿಗೆ ಹೋಗಿ ಪ್ಲಾಸ್ಟಿಕ್‌ ಮೆಸ್‌\ಬಲೆ ಖರೀದಿಸಲು ವಿಚಾರಿಸಿದ್ದಾರೆ. ಆಗ ಅಂಗಡಿಯವರು ಸುಮಾರು ₹ 17 ಸಾವಿರ ಆಗುತ್ತದೆ ಎಂಬುದಾಗಿ ಹೇಳಿದ್ದಾರೆ.

ADVERTISEMENT

ಆಗ ನರಸಿಂಹ ಬರಿಗೈಲಿ ಹಿಂದಿರುಗಿ ಸುಲಭದ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಊರಿನಲ್ಲಿ ಹಳೆಯ ಬಣ್ಣದ ಹತ್ತಾರು ಸೀರೆಗಳನ್ನು ಸಂಗ್ರಹಿಸಿದ್ದಾರೆ. ನಂತರ ಆ ಸೀರೆಗಳನ್ನು ತಂದು ರಾಗಿ ಹೊಲದ ಸುತ್ತ ಕಂಬ ನೆಟ್ಟು, ತಂತಿ ಬೇಲಿ ಬಳಸಿ ಅದಕ್ಕೆ ಕಟ್ಟಿದ್ದಾರೆ.

ಈ ಭಾಗದಲ್ಲಿ ತರಕಾರಿ ಬೆಳೆಯುವುದೂ ಕಷ್ಟ. ಏಕೆಂದರೆ ಫಸಲು ಬರುತ್ತಿದ್ದಂತೆ ಕಾಡು ಪ್ರಾಣಿಗಳು ನುಗ್ಗಿ ತಿಂದು ಹಾಕುತ್ತವೆ.

ಈ ಭಾಗದಲ್ಲಿ ಜಮೀನು ಇದ್ದರೂ ಕಾಡುಪ್ರಾಣಿಗಳ ಕಾಟದ ಕಾರಣ ಹೆಚ್ಚಿನ ರೈತರು ಕೃಷಿ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ರಾತ್ರಿ ವೇಳೆ ಕಾಡುಹಂದಿಗಳು ಹಿಂಡುಹಿಂಡಾಗಿ ಬಂದು ರಾಗಿ ತೆನೆ, ಆವರೆ ಕಾಯಿ ತಿನ್ನುತ್ತವೆ. ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ತೊಟ್ಲಿ ಗ್ರಾಮದ ಟಿ.ವಿ.ರಮೇಶ್‌ ಹೇಳಿದರು. 

ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರಾಗಿ ಬೆಳೆ ಸುತ್ತ ಸೀರೆ ಕಟ್ಟಿರುವುದು

ಬೆಳೆಗೆ ಜಿಂಕೆ, ಕಾಡುಹಂದಿಗಳ ಕಾಟ ಪ್ಲಾಸ್ಟಿಕ್‌ ಬಲೆಗೆ ₹ 17 ಸಾವಿರ ಅಂಗಡಿಯವರು ತೆನೆ ಬರುವ ಹಂತದಲ್ಲಿರುವ ರಾಗಿ ಬೆಳೆಗೆ ರಕ್ಷಣೆ

15 ದಿನಗಳಲ್ಲಿ ರಾಗಿ ತೆನೆ ಕಟ್ಟಲಿದೆ. ಆಗ ಕಾಡು ಹಂದಿಗಳು ತಿಂದು ನಾಶ ಮಾಡುತ್ತವೆ. ವರ್ಷ ವರ್ಷ ಇದರಿಂದ ನಷ್ಟವಾಗುತಿತ್ತು. ಹೀಗಾಗಿ ಸೀರೆ ಕಟ್ಟಿ ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆ
ನರಸಿಂಹ ರೈತ ತೊಟ್ಲಿ
ಕಾಡಂಚಿನ ಪ್ರದೇಶ ಕಾರಣ ಪ್ರಾಣಿಗಳ ಕಾಟ ಹೆಚ್ಚು. ಬಡ ರೈತರೊಬ್ಬರು ಊರಿನಲ್ಲಿ ಭಿಕ್ಷೆ ಬೇಡಿ ಹಳೆ ಸೀರೆ ಸಂಗ್ರಹಿಸಿದ್ದಾರೆ. ರಾಗಿ ಬೆಳೆ ಸುತ್ತ ಸೀರೆ ಕಟ್ಟಿ ಕಾವಲು ಕಾಯುತ್ತಿದ್ದಾರೆ
ಟಿ.ವಿ.ರಮೇಶ್ ತೊಟ್ಲಿ ನಿವಾಸಿ
ಇನ್ನೂ ಹಲವು ಮಾರ್ಗೋಪಾಯ
ಇನ್ನು ಕೆಲ ರೈತರು ಕಾಡುಪ್ರಾಣಿಗಳಿಂದ ತಮ್ಮ ಬೆಳೆ ರಕ್ಷಿಸಿಕೊಳ್ಳಲು ಬೇರೆ ಬೇರೆ ಮಾರ್ಗೋಪಾಯ ಕಂಡುಕೊಳ್ಳುತ್ತಿದ್ದಾರೆ. ಬಿಯರ್‌ ಬಾಟಲಿಗಳನ್ನು ಕೋಲಿಗೆ ಕಟ್ಟಿ ಜಮೀನಿನಲ್ಲಿ ನೇತು ಹಾಕುತ್ತಾರೆ. ಎಫ್‌.ಎಂ ರೇಡಿಯೊ ಅಳವಡಿಸುತ್ತಾರೆ. ಬೊಂಬೆ ಕಟ್ಟುವುದು ವಿದ್ಯುತ್‌ ಲೈಟ್‌ ಅಳವಡಿಸುವುದು ಮಾಡುತ್ತಾರೆ. ಕೆಲವರು ಗುಡಿಸಲು ಹಾಕಿಕೊಂಡು ರಾತ್ರಿಯಿಡೀ ಕಾವಲು ಕಾಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.