ADVERTISEMENT

ವಿಸ್ಟ್ರಾನ್‌: ಎಸ್‌ಎಫ್‌ಐ ಅಧ್ಯಕ್ಷ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 16:27 IST
Last Updated 16 ಡಿಸೆಂಬರ್ 2020, 16:27 IST

ಕೋಲಾರ: ಆ್ಯಪಲ್‌ ಐಫೋನ್‌ ಉತ್ಪಾದಿಸುವ ವಿಸ್ಟ್ರಾನ್ ಕಂಪನಿ ಮೇಲೆ ನಡೆದ ಕಾರ್ಮಿಕರ ದಾಳಿ ಪ್ರಕರಣ ಸಂಬಂಧ ವೇಮಗಲ್‌ ಪೊಲೀಸರು ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕಾಂತ್‌ ಅವರನ್ನು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಸ್ಟ್ರಾನ್‌ ಕಂಪನಿ ಮೇಲಿನ ದಾಳಿಯಲ್ಲಿ ಎಸ್‌ಎಫ್‌ಐ ಸಂಘಟನೆಯ ಕೈವಾಡವಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಶ್ರೀಕಾಂತ್‌ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರ ಕ್ರಮದ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶ್ರೀಕಾಂತ್‌ರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಎಸ್‌ಎಫ್‌ಐ ಕಾರ್ಯಕರ್ತರು #standwithcomradesrikanth# ಅಭಿಯಾನ ಆರಂಭಿಸಿದ್ದಾರೆ. ಅಲ್ಲದೇ, ಸಂಸದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಘಟನೆಯ ಹಿಂದಿನ ದಿನ (ಡಿ.11) ಶ್ರೀಕಾಂತ್‌ ಅವರು ವಿಸ್ಟ್ರಾನ್‌ ಕಂಪನಿ ಬಳಿ ಹೋಗಿ ಕಾರ್ಮಿಕರ ವೇತನದ ವಿಚಾರವಾಗಿ ಧ್ವನಿ ಎತ್ತಿದ್ದರು. ಅಲ್ಲದೇ, ಪ್ರತಿಭಟನೆ ಮಾಡಲು ಯತ್ನಿಸಿದ್ದರು. ಜತೆಗೆ ಕಂಪನಿ ಮೇಲೆ ದಾಳಿ ನಡೆಸುವಂತೆ ಕಾರ್ಮಿಕರಿಗೆ ಪ್ರಚೋದನೆ ನೀಡಿದ್ದರು’ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

‘ಪ್ರಕರಣ ಸಂಬಂಧ ಮಂಗಳವಾರದವರೆಗೆ ಕಂಪನಿಯ 159 ಗುತ್ತಿಗೆ ಕಾರ್ಮಿಕರನ್ನು ಬಂಧಿಸಲಾಗಿತ್ತು. ಬುಧವಾರ ಮತ್ತೆ 6 ಕಾರ್ಮಿಕರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.