ಕುಷ್ಟಗಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ’ ಎಂದು ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ತಾಲ್ಲೂಕಿನ ಬಿಜಕಲ್ಲ ಗ್ರಾಮದಲ್ಲಿ ನಡೆದ ‘ಮನೆ ಮನೆಗೆ ಕಾಂಗ್ರೆಸ್’ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಸಾಲ ಮನ್ನಾ, ಜನಸಾಮಾನ್ಯರು, ದೀನ ದಲಿತರು ಸೇರಿದಂತೆ ಎಲ್ಲರಿಗೂ ಒಂದಲ್ಲ ಒಂದು ಯೋಜನೆಗಳ ಪ್ರಯೋಜನ ದೊರೆಯುವಂತೆ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಆಡಳಿತ ನೀಡಿದ್ದಾರೆ’ ಎಂದರು.
‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರ ರೈತರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತ ಬಂದ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.
ಪ್ರಮುಖರಾದ ಸಂಗಪ್ಪ ವಂಕಲಕುಂಟಿ, ರುದ್ರಯ್ಯ ಮಠಪತಿ, ಮಾನಪ್ಪ ತಳವಾರ, ಮಲ್ಲಿಕಾರ್ಜುನ ವಂಕಲಕುಂಟಿ, ತಿಪ್ಪಣ್ಣ ತಳುವಗೇರಿ, ಹನುಮಂತಪ್ಪ ಭೋವಿ, ಬಸವರಾಜ ತಳುವಗೇರಿ, ಆನಂದ ಭೋವಿ, ಶಿವು ಕರಕನಗೌಡ್ರ, ಕಿಡಿಯಪ್ಪ ಉಪನಾಳ, ಹುಸೇನಸಾಬ್ ಮುಜಾವರ, ಭೀಮಣ್ಣ ದಾಸರ, ಪ್ರಕಾಶ ಬಡಿಗೇರ, ಮಂಜುನಾಥ ಗುಜಮಾಗಡಿ ಇದ್ದರು.
ಹನುಮಸಾಗರ ವರದಿ: ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ‘ಮನೆ ಮನೆಗೆ ಕಾಂಗ್ರೆಸ್’ ಕಾರ್ಯಕ್ರಮದ ಪ್ರಚಾರ ನಡೆಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜ ಮಾರನಬಸರಿ, ಯಮನೊರಪ್ಪ ಹನಮನಾಳ, ಯಲ್ಲಪ್ಪ ಬಾಗಲಿ, ರುದ್ರಪ್ಪ ಚಂದ್ರಗಿರಿ, ರಾಜೂ ಜಿಗಳೂರು, ಕಳಕೇಶ ಜೋಗಿನ, ಮಹಾಂತೇಶ ಯರಗೇರಿ, ವಿರೇಶ ಪಟ್ಟಣಶೆಟ್ಟಿ, ಹನುಮಪ್ಪ ಜಾಲಿಮರದ, ಮುತ್ತಪ್ಪ ಜಾಲಿಮರದ, ಸುರೇಶ ಹೊಸಮನಿ, ಇಮಾಸಾಬ ಬಳ್ಳಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.