ಕುಷ್ಟಗಿ: ಪಟ್ಟಣದ ಹೊರವಲಯದ ಕೊಪ್ಪಳ ರಸ್ತೆಯಲ್ಲಿ ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕ್ಯೂಟ್ಹೌಸ್ ಕೆಲಸ ಕಾಮಗಾರಿಗಳು ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.
ಶುಕ್ರವಾರ ಸಂಜೆ ಸರ್ಕ್ಯೂಟ್ಹೌಸ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಬಾಕಿ ಕೆಲಸವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಜ.23ರಂದು ಬೆಳಿಗ್ಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸುವರು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಷ್ಕರಿ ನಾಯ್ಕ ಮಾಹಿತಿ ನೀಡಿದರು.
ಕಾಮಗಾರಿ ಪೂರ್ಣಗೊಂಡಿದ್ದು ಒಳ ಅಲಂಕಾರ ಮತ್ತಿತರೆ ಸಣ್ಣಪುಟ್ಟ ಕೆಲಸಗಳು ಉಳಿದಿದ್ದು ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಇಲಾಖೆ ಎಂಜಿನಿಯರ್ಗೆ ಸೂಚಿಸಲಾಗಿದೆ. ಅದೇ ರೀತಿ ಹನಮಸಾಗರ ಮತ್ತು ಹನಮನಾಳದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರಗಳ ಕಾಮಗಾರಿಯೂ ಪೂರ್ಣಗೊಂಡಿದ್ದು ಅದೇ ದಿನ ಅವುಗಳ ಪ್ರಾರಂಭೋತ್ಸವವನ್ನು ನೆರವೇರಿಸಲಾಗುತ್ತದೆ ಎಂದು ಲಷ್ಕರಿ ನಾಯ್ಕ ತಿಳಿಸಿದರು.
ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ತಾಲ್ಲೂಕು ಕ್ರೀಡಾಂಗದ ಉದ್ಘಾಟನೆಯನ್ನೂ ಸಚಿವ ನಿರಾಣಿ ನೆರವೇರಿಸಲಿದ್ದಾರೆ. ಸರ್ಕ್ಯೂಟ್ಹೌಸ್ ಮತ್ತು ಪ್ರವಾಸಿ ಮಂದಿರಗಳ ಉದ್ಘಾಟನೆ ಅಲ್ಲಿಯೇ ಸಾಂಕೇತಿಕವಾಗಿ ನಡೆಯಲಿದೆ ಎಂದು ಹೇಳಿದರು. 4 ಎಕರೆ ವಿಸ್ತಾರದ ಸ್ಥಳ ಹೊಂದಿರುವ ಸರ್ಕ್ಯೂಟ್ಹೌಸ್ನಲ್ಲಿ ವಿಶಾಲವಾದ ಕೋಣೆ, ಸಭಾಂಗಣ, ಡೈನಿಂಗ್ ಹಾಲ್ ಉತ್ತಮ ರೀತಿಯಲ್ಲಿ ನಿರ್ಮಿಸಲಾಗಿದೆ. ಆವರಣ ಸಾಕಷ್ಟು ವಿಸ್ತಾರ ಹೊಂದಿದ್ದು ಅದರ ಒಳಗೆ ಬೀಳುವ ಮಳೆ ನೀರನ್ನು ಮರುಪೂರಣಗೊಳಿಸಿ ಅಂತರ್ಜಲ ಹೆಚ್ಚಿಸುವುದಕ್ಕೆ ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ನಾಯ್ಕ ವಿವರಿಸಿದರು.
ತಹಶೀಲ್ದಾರ ವೀರೇಶ ಬಿರಾದಾರ, ಸಿಪಿಐ ನೀಲಪ್ಪ ಓಲೇಕಾರ, ಪಿಎಸ್ಐ ಮಹಾದೇವ ಪಂಚಮುಖಿ, ಎಂಜಿನಿಯರ್ ಭೀಮಸೇನ ವಜ್ರಬಂಡಿ, ತಾಜುದ್ದೀನ, ರಾಜಶೇಖರ ತುರಕಾಣಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.