ಕೊಪ್ಪಳ:ತಾಲ್ಲೂಕಿನ ಮುನಿರಾಬಾದ್ ಬಳಿ ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಲ್.ಎನ್.ಬೆಳವಣಿಕಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಎಲ್.ಎನ್.ಬೆಳವಣಿಕಿ ಸಂಗ್ರಹಿಸಿದ್ದ 7,05,000 ರೂಪಾಯಿ ಲಂಚದ ಹಣವನ್ನು ಇಲಾಖೆಯು ಬಾಡಿಗೆಗೆ ಪಡೆದಿದ್ದ ಕಾರಿನಲ್ಲಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹಣ ಸಾಗಿಸಲು ಬಳಸಿದ ವಾಹನವನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರಿನಲ್ಲಿ ಸಿಕ್ಕ ಹಣದ ಬಗ್ಗೆ ಬೆಳವಣಿಕಿ ಅವರು ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡಲಿಲ್ಲ. ಅಲ್ಲದೇ, ಸಾಗಿಸುತ್ತಿದ್ದ ಹಣದ ಬಗ್ಗೆ ಯಾವುದೇ ದಾಖಲೆಗಳನ್ನು ಸಹ ಹಾಜರುಪಡಿಸಲಿಲ್ಲ.
ಈ ಹಿನ್ನೆಲೆಯಲ್ಲಿ, ಸಂಗ್ರಹಿತ ಹಣವನ್ನು ಲಂಚದ ಹಣ ಎಂದು ಪರಿಗಣಿಸಿ, ಅಪರಾಧಿಕ ದುರ್ನಡತೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಎಲ್.ವೈ.ಶಿರಕೋಳ, ಇನ್ಸ್ಪೆಕ್ಟರ್ ಸಲೀಂ ಪಾಷಾ, ಸಿಬ್ಬಂದಿಯಾದ ವಿಲಾಸ ಭೋಂಸ್ಲೆ, ದಕ್ಷಿಣಾಮೂರ್ತಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.