ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಬರೋಬ್ಬರಿ ಒಂದು ತಿಂಗಳ ಅವಧಿಯಲ್ಲಿ 28 ಟಿಎಂಸಿ ಅಡಿ ನೀರು ಖಾಲಿಯಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ತಲೆ ತೋರಿದೆ.
ಅಕ್ಟೋಬರ್ 5ರಂದು ಜಲಾಶಯದಲ್ಲಿ 53 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ನ. 5ರ ಅಂತ್ಯಕ್ಕೆ 28.96 ಟಿಎಂಸಿ ಅಡಿ ನೀರು ಇದೆ.
ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಐಸಿಸಿ ಸಲಹಾ ಸಮಿತಿಯ ತುರ್ತು ಸಭೆಯಲ್ಲಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.10ರ ವರೆಗೆ 1,000 ಕ್ಯೂಸೆಕ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1,600 ಅಡಿ ತಲುಪುವವರೆಗೆ ಲಭ್ಯತೆ ಅನುಸಾರ ಮುಂಬರುವ ಒಳಹರಿವಿನ ಪರಿಗಣಿಸಿ ನೀರು ಹರಿಸಲು ನಿರ್ಧರಿಸಲಾಗಿತ್ತು. ಅದರಂತೆ ಇದೇ 10ರಂದು ನೀರು ನಿಲುಗಡೆಯಾಗಲಿದೆ. ಆದರೆ, ಆ ಭಾಗದ ರೈತರು ನ. 15ರ ತನಕ ನೀರು ಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ಅದಕ್ಕಾಗಿ ಸೋಮವಾರ ರೈತ ಸಂಘಟನೆಗಳು ಮುನಿರಾಬಾದ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ರಚನೆ: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ಜೀವನಾಡಿ ಎನಿಸಿದ ಎಡದಂಡೆ ಕಾಲುವೆಗಳ ಪ್ರತಿ ಹನಿ ನೀರು ರೈತರಿಗೆ ಅಗತ್ಯವಾಗಿದೆ. ಆದ್ದರಿಂದ ಕೊನೆಯ ಭಾಗದ ಹಳ್ಳಿಗಳಿಗೆ ನೀರು ತಲುಪುತ್ತಿಲ್ಲ ಎಂದು ರಾಯಚೂರು ಜಿಲ್ಲೆಯ ರೈತರು ಹೇಳುತ್ತಿದ್ದು, ನೀರು ಸಮರ್ಪಕವಾಗಿ ತಲುಪಲು ರಾಯಚೂರು ಜಿಲ್ಲಾಡಳಿತ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಿದೆ. ಇದು ಜಿಲ್ಲೆಯ ರೈತರ ಮೇಲೂ ಪರಿಣಾಮ ಬೀರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.