ಗಂಗಾವತಿ: ಇಲ್ಲಿನ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಇಲ್ಲಿನ ಕಲ್ಲುಮಠದ ಪೀಠಾಧಿಪತಿಗಳ ಕಾಯಂ ಅಧ್ಯಕ್ಷ ಸ್ಥಾನ ಬದಲಿಸುವ ಮಹತ್ವದ ನಿರ್ಣಯವನ್ನು ಗುರುವಾರ ನಡೆದ ಸಂಘದ ಆಡಳಿತ ಮಂಡಳಿಯಲ್ಲಿ ಕೈಗೊಳ್ಳಲಾಯಿತು.
ವಿದ್ಯಾವರ್ಧಕ ಸಂಘಕ್ಕೆ ಇದುವರೆಗೂ ಕಲ್ಲುಮಠದ ಪೀಠಾಧಿಪತಿಯೇ ಕಾಯಂ ಅಧ್ಯಕ್ಷರಾಗಿದ್ದು, ಸ್ಥಾನವನ್ನು ಬದಲಿಸಿ ಚುನಾವಣೆ ನಡೆಸಬೇಕು ಎಂದು ತೀರ್ಮಾನ ಕೈಗೊಂಡರು.
ಅಲ್ಲದೇ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಅವಕಾಶವಿರಲಿಲ್ಲ. ಇಂದಿನ ಸಭೆಯಲ್ಲಿ ಅವಿಶ್ವಾಸ ಮಂಡನೆಗೂ ಅವಕಾಶ ಕಲ್ಲಿಸುವ ನಿರ್ಣಯ ಕೈಗೊಂಡರು. ಸಂಘದ ಕಾಯಂ ವಿಳಾಸವನ್ನು ಕಲ್ಲುಮಠದ ಬದಲಿಗೆ ಕೊಟ್ಟೂರೇಶ್ವರ ಕಾಲೇಜುಗಳ ಸಂಯುಕ್ತ ಆವರಣದ ಕಚೇರಿ ಎಂದು ಬದಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸ್ವಾಮೀಜಿ ಕಳಂಕ ಹೊತ್ತಿರುವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಕೊಟ್ಟೂರು ಸ್ವಾಮೀಜಿಯನ್ನು ಆಗ್ರಹಿಸಲಾಗಿತ್ತು. ಆದರೆ ಸ್ವಾಮೀಜಿ ಇದಕ್ಕೆ ಒಪ್ಪರಲಿಲ್ಲ.
ಸದಸ್ಯ ಅಶೋಕಸ್ವಾಮಿ ಹೇರೂರು, ವಿವಿಧ ನಿರ್ಣಯ ಮಂಡಿಸುತ್ತಿದ್ದಂತೆ ಸ್ವಾಮೀಜಿ ಸಭೆಯ ಮಧ್ಯೆಯೇ ಎದ್ದು ಹೋದರು ಎಂದು ತಿಳಿದು ಬಂದಿದೆ.
ಸಂಸ್ಥೆಯ ಉಪಾಧ್ಯಕ್ಷ ಅಕ್ಕಿ ಚಿನ್ನಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಸಂಘದ ಕಾರ್ಯದರ್ಶಿ ಎಚ್.ಪ್ರಭಾಕರ್, ಸದಸ್ಯರಾದ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುವಳ್ಳಿ, ಗುಂಜಳ್ಳಿ ರಾಜಶೇಖರಪ್ಪ, ಸಿದ್ದಾಪುರ ಮಲ್ಲಪ್ಪ, ಎಚ್. ಮಂಜುನಾಥ, ಸಿಂಗನಾಳ ಸುರೇಶ, ಕಳಕನಗೌಡ ಪಾಟೀಲ್, ಭಾವಿಕಟ್ಟಿ ಶೇಖರಪ್ಪ, ನೂಲ್ವಿ ಮಲ್ಲಿಕಾರ್ಜುನ, ಅರಳಿ ಮಲ್ಲಪ್ಪ, ಸಿದ್ದನಗೌಡ ವಕೀಲ, ನಾಗಪ್ಪ ಗಲಗಲಿ ಇದ್ದರು.
**
ಪ್ರಜಾಪ್ರಭುತ್ವದ ವ್ಯವಸ್ಥೆ ಯಂತೆ ಕೊಟ್ಟೂರೇಶ್ವರ ವಿದ್ಯಾವರ್ದಕ ಸಂಘದ ಅಧ್ಯಕ್ಷ ಸ್ಥಾನವೂ ಮತದಾನದ ಮೂಲಕ ಆಯ್ಕೆ ನಡೆಯಲಿದೆ.<
–ಅಶೋಕ ಸ್ವಾಮಿ ಹೇರೂರು, ಹೋರಾಟ ಸಮಿತಿ ಸಹ ಸಂಚಾಲಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.