ADVERTISEMENT

Video Story- ಕೊಪ್ಪಳದಲ್ಲಿ ಬಲೆಗೆ ಬಿದ್ದ ಕರಡಿ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 15:34 IST
Last Updated 11 ಜುಲೈ 2022, 15:34 IST
ಕೊಪ್ಪಳ ತಾಲ್ಲೂಕಿನ ಇರಕಲ್‌ಗಡ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿದರು
ಕೊಪ್ಪಳ ತಾಲ್ಲೂಕಿನ ಇರಕಲ್‌ಗಡ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿದರು   

ಕೊಪ್ಪಳ: ಜನರಲ್ಲಿ ಆತಂಕ ಸೃಷ್ಟಿಸಿದ್ದ ಕರಡಿಯನ್ನು ಸೋಮವಾರ ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ದರೋಜಿ ಕರಡಿ ಧಾಮಕ್ಕೆ ಬಿಟ್ಟಿದ್ದಾರೆ. ಇದರಿಂದಾಗಿ ತಾಲ್ಲೂಕಿನಚಾಮಲಾಪುರ ಮತ್ತುಇರಕಲ್‌ಗಡ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಚಾಮಲಾಪುರ ಗ್ರಾಮದ ಹೊಲಗಳಲ್ಲಿ ಭಾನುವಾರ ಸಂಜೆ ಕರಡಿ ಕಾಣಿಸಿಕೊಂಡಿತ್ತು. ಇದೇ ಕರಡಿ ಸೋಮವಾರ ಬೆಳಿಗ್ಗೆ ಸಮೀಪದ ಪಕ್ಕದ ಇರಕಲ್‌ಗಡ ಗ್ರಾಮದಲ್ಲಿ ಪತ್ತೆಯಾಯಿತು. ಹೊಲಗಳಲ್ಲಿ ಓಡಾಡಿದ್ದರಿಂದ ಜನ ಭಯಭೀತಗೊಂಡಿದ್ದರು. ಸೋಮವಾರ ಬೆಳಿಗ್ಗೆಯಿಂದ ಸತತ ನಾಲ್ಕೈದು ತಾಸು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇರಕಲ್‌ಗಡದ ವೀರಬಸಪ್ಪ ಶೆಟ್ಟರ್ ಅವರ ಕಬ್ಬಿನ ಹೊಲದಲ್ಲಿ ಸೆರೆ ಹಿಡಿದಿದ್ದಾರೆ.

ಕರಡಿ ನೋಡಿದ ಜನ ಮೊದಲು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಹೊಲವನ್ನು ಸುತ್ತುವರೆದು ಕರಡಿಯ ಚಲನವಲನದ ಮೇಲೆ ನಿಗಾ ಇಟ್ಟಿದ್ದರು. ಕಮಲಾಪುರ ಪ್ರಾಣಿಸಂಗ್ರಹಾಲಯದ ಅರವಳಿಕೆ ತಜ್ಞೆ ಡಾ.ವಾಣಿ ಗನ್‌ ಮೂಲಕ ಅರವಳಿಕೆ ಮದ್ದು ನೀಡಿದ್ದರು.

ADVERTISEMENT

‘ಕರಡಿಗೆ ವಯಸ್ಸಾಗಿದ್ದು, ಸಾಕಷ್ಟು ಓಡಾಡಿದ್ದರಿಂದ ನಿತ್ರಾಣಗೊಂಡಿತ್ತು.ಚಾಮಲಾಪುರ, ಇರಕಲ್‌ಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿತ್ತು. ಗ್ರಾಮಸ್ಥರ ನೆರವಿನೊಂದಿಗೆ ನಮ್ಮ ಸಿಬ್ಬಂದಿ ಸೆರೆ ಹಿಡಿದರು. ಕಬ್ಬು, ಕಲ್ಲಂಗಡಿ, ಸಪೋಟಾದ ಬೆಳೆಗಳ ನಡುವೆ ಓಡಾಡಿತ್ತು’ ಎಂದು ಆರ್‌ಎಫ್‌ಒ ಕೆ.ಎಂ. ನಾಗರಾಜ ತಿಳಿಸಿದರು. ಕಾರ್ಯಾಚರಣೆಯಲ್ಲಿ ಡಿಸಿಎಫ್‌ ಹರ್ಷಕುಮಾರ ಚಿಕ್ಕನರಗುಂದ, ಎಸಿಎಫ್‌ ಮಾರ್ಕಂಡೇಯ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.