ADVERTISEMENT

ಕುಷ್ಟಗಿ: ಸಂಭ್ರಮದ ಅಡವಿರಾಯ ರಥೋತ್ಸವ

ಎರಡು ವರ್ಷಗಳ ನಂತರ ಕಳೆಗಟ್ಟಿದ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:02 IST
Last Updated 18 ಮೇ 2022, 4:02 IST
ಕುಷ್ಟಗಿಯಲ್ಲಿ ಸೋಮವಾರ ಅಡವಿರಾಯ ರಥೋತ್ಸವ ಜರುಗಿತು
ಕುಷ್ಟಗಿಯಲ್ಲಿ ಸೋಮವಾರ ಅಡವಿರಾಯ ರಥೋತ್ಸವ ಜರುಗಿತು   

ಕುಷ್ಟಗಿ: ಇಲ್ಲಿಯ ಅಡವಿಮುಖ್ಯಪ್ರಾಣೇಶ (ಅಡವಿರಾಯ) ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ರಥೋತ್ಸವವು ಅಪಾರ ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು.

ಉತ್ಸವ ಮೂರ್ತಿಯನ್ನು ಸಿಂಗರಿಸಿದ ರಥದಲ್ಲಿ ಇರಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ನೆರವೇರಿಸಲಾಯಿತು. ಪಟ್ಟಣ ಸೇರಿದಂತೆ ಸುತ್ತಲಿನ ಅನೇಕ ಊರು, ಪಟ್ಟಣಗಳ ಸಹಸ್ರಾರು ಸಂಖ್ಯಯೆ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಅನೇಕ ನವದಂಪತಿ ಜೋಡಿಗಳು ರಥೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡಿರುವುದು ಕಂಡುಬಂದಿತು.

ಕೋವಿಡ್‌ ಸಮಸ್ಯೆ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದಲೂ ಅಡವಿರಾಯ ರಥೋತ್ಸವ ಸಾಂಕೇತಿಕವಾಗಿ ನಡೆದಿತ್ತು. ಈ ಬಾರಿ ತೊಂದರೆ ನಿವಾರಣೆ ಆಗಿರುವುದರಿಂದ ಪ್ರವಾಹೋಪಾದಿಯಲ್ಲಿ ಭಕ್ತರು ರಥೋತ್ಸವಕ್ಕೆ ಆಗಮಿಸಿ ಸಂಭ್ರಮಿಸಿದರು. ನೂಕುನುಗ್ಗಲು ಉಂಟಾಗಿತ್ತು.

ADVERTISEMENT

ಜಾತ್ರಾ ಮಹೋತ್ಸವದ ನಿಮಿತ್ತ ಬೆಳಿಗ್ಗೆ ಅಡವಿರಾಯ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ವ್ಯಾಸಪೂಜೆ, ಪುರಾಣ ಮಂಗಲ, ಪವಮಾನಹೋಮ, ರಥಾಂಗಹೋಮ, ಸತ್ಯನಾರಾಯಣ ಪೂಜೆ ಇತರೆ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. ರಥೋತ್ಸವದ ನಂತರ ಹರಿವಾಣ ಸೇವೆ, ಪತ್ತಾ ಸೇವಾ ಕಾರ್ಯಕ್ರಮಗಳು ಜರುಗಿದವು.

ಜಾತ್ರೆ ನಿಮಿತ್ತ ಬೆಳಿಗ್ಗೆ ಶಾಸಕ ಅಮರೇಗೌಡ ಬಯ್ಯಾಪುರ ಅವರು ಅಡವಿರಾಯ ದೇವರ ದರ್ಶನ ಪಡೆದರು. ಸಂಜೆ ನಡೆದ ರಥೋತ್ಸವದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭಾಗವಹಿಸಿದ್ದರು. ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ, ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವೀರಪ್ಪ ನಾಯಕ ಮತ್ತು ಸಿಬ್ಬಂದಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದರು. ಜಾತ್ರಾ ಮಹೋತ್ಸವದ ಪ್ರಮುಖರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.