ಕೊಪ್ಪಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಸಿಬ್ಬಂದಿ
ಕೊಪ್ಪಳ: ಬಸ್ಸು, ರೈಲುಗಳಲ್ಲಿ ಓಡಾಡಿ ಖುಷಿಪಟ್ಟಿದ್ದ ಆ ಮಕ್ಕಳಿಗೆ ಜೀವನದಲ್ಲಿ ಮೊದಲ ಬಾರಿಗೆ ಲೋಹದ ಹಕ್ಕಿ ಸದ್ದು ಆಲಿಸುತ್ತ, ಅದರಲ್ಲಿಯೇ ಪ್ರಯಾಣಿಸುವ ಅವಕಾಶ ಒದಗಿಬಂದಿತ್ತು. ನಾವಂತೂ ವಿಮಾನದಲ್ಲಿ ಓಡಾಡಲು ಆಗಲಿಲ್ಲ; ಈಗ ನಮ್ಮ ಮಕ್ಕಳಿಗಾದರೂ ಈ ಭಾಗ್ಯ ಲಭಿಸಿತಲ್ಲ ಎನ್ನುವ ಖುಷಿ ಪೋಷಕರಲ್ಲಿ ಮನೆ ಮಾಡಿತ್ತು.
ವಿದ್ಯಾರ್ಥಿಗಳಿಗೆ ವಿಭಿನ್ನವಾಗಿ ಶಾಲಾ ಶೈಕ್ಷಣಿಕ ಪ್ರವಾಸ ಆಯೋಜಿಸಿದ ಖುಷಿ ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ಕಂಡುಬಂದಿತು. ಈ ಎಲ್ಲ ಚಿತ್ರಣಗಳಿಗೆ ಶುಕ್ರವಾರ ಸಾಕ್ಷಿಯಾಗಿದ್ದು ಕೊಪ್ಪಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ.
ಈ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್ಡಿಎಂಸಿ ಸಿಬ್ಬಂದಿ ಶಾಲೆಯಿಂದ ತೋರಣಗಲ್ಗೆ ವಾಹನದಲ್ಲಿ ತೆರಳಿ ಅಲ್ಲಿಂದ ವಿಮಾನದಲ್ಲಿ ಹೈದರಾಬಾದ್ಗೆ ಪ್ರಯಾಣಿಸಿದರು. ವಿಮಾನ ನಿಲ್ದಾಣದಲ್ಲಿ ಎಲ್ಲರೂ ಒಟ್ಟಾಗಿ ಫೋಟೊ ತೆಗೆಯಿಸಿಕೊಂಡು ಖುಷಿಪಟ್ಟರು. ಈ ಶಾಲೆಯ 30 ಜನ ವಿದ್ಯಾರ್ಥಿಗಳು, ಆರು ಜನ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಆರು ಜನ ಶಿಕ್ಷಕರು ಡಿ. 9ರ ತನಕ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು.
ವಿಮಾನಯಾನದ ಖರ್ಚನ್ನು ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಗೂ ಖಾಸಗಿ ಕಂಪನಿಗಳಿಗೆ ಭರಿಸಲಾಗುತ್ತಿದೆ.
ಮಕ್ಕಳ ವಿಮಾನಯಾನದ ಪ್ರವಾಸಕ್ಕೆ ಶಾಲೆಯ ಆವರಣದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿ ‘ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಲಿಂಗದಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ವಿಮಾನದಲ್ಲಿ ಪ್ರವಾಸ ಕೈಗೊಂಡಿದ್ದು ಖುಷಿ ನೀಡಿದೆ’ ಎಂದರು.
ಕಿರ್ಲೊಸ್ಕರ್ ಕಂಪನಿಯ ಪ್ರತಿನಿಧಿ ಡಿ.ನಾರಾಯಣ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್., ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪವ್ವ ನಾಯಕ್, ಮುರಳಿ ಲಿಂಗದಹಳ್ಳಿ, ಪಿಡಿಒ ಗೀತಾ ಕುಮಾರಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.