ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆ, ಆಂಜನೇಯ ದೇವಸ್ಥಾನ ಮತ್ತು ನೀರಾವರಿ ಇಲಾಖೆ ಐಬಿ ಬಳಿ ವಾಟರ್ ಫಾಲ್ಸ್, ಕೆರೆಯಲ್ಲಿ ಸ್ಥಳೀಯರು ಕಾನೂನು ಬಾಹಿರವಾಗಿ, ಪರವಾನಗಿ ಇಲ್ಲದೆ ಹರಿಗೋಲು(ತೆಪ್ಪ) ಹಾಕಿ ಪ್ರವಾಸಿಗರಿಗೆ ದುಬಾರಿ ಶುಲ್ಕ ವಿಧಿಸಿ, ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದು ಹಲವು ತಿಂಗಳಿನಿಂದ ನಡೆಯುತ್ತಿದ್ದು, ಸಾಣಾಪುರ ಗ್ರಾ.ಪಂ ಅಧಿಕಾರಿಗಳು, ಸದಸ್ಯರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಾಣಾಪುರ ಸುತ್ತ ಹಂಪಿ, ಅಂಜನಾದ್ರಿ, ಪಂಪಾಸರೋವರ, ಆನೆಗೊಂದಿ ಸೇರಿ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರು ಇವುಗಳನ್ನು ವೀಕ್ಷಿಸಿ ನೇರವಾಗಿ ಸಾಣಾಪುರ ಕೆರೆ, ಜಲಪಾತಕ್ಕೆ ಭೇಟಿ ಕೊಡುತ್ತಾರೆ.
ತೆಪ್ಪು ಹಾಕುವವರ ನಡುವೆ ಗುಂಪುಗಾರಿಕೆ: ಆರಂಭದಿಂದ ತೆಪ್ಪ ಹಾಕುತ್ತಾ ಬಂದವರು, ಹೊಸದಾಗಿ ತೆಪ್ಪ ಹಾಕುವವರಿಗೆ ಅವಕಾಶ ನೀಡದೆ ದೌರ್ಜನ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಹಳೆ-ಹೊಸದಾಗಿ ತೆಪ್ಪ ಹಾಕುವವರ ನಡುವೆ ವೈಷಮ್ಯ ಸೃಷ್ಟಿಯಾಗಿ ಈಚೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ತೆಪ್ಪ ಸವಾರಿಯ ದರಪಟ್ಟಿಯಿಲ್ಲ: ಸಾಣಾಪುರ ಕೆರೆ, ವಾಟರ್ ಫಾಲ್ಸ್ನಲ್ಲಿ ತೆಪ್ಪಹಾಕುವವರು ದರಪಟ್ಟಿ ಹಾಕುವುದೇ ಇಲ್ಲ.
ತೆಪ್ಪದಲ್ಲಿ ಸವಾರಿ ಮಾಡಲು 15, 20, 30 ನಿಮಿಷ, ಲಾಂಗ್ ಡ್ರೈವ್ ಎಂದು ಸಮಯ ನಿಗದಿಪಡಿಸಿ ₹2 ರಿಂದ ₹4 ಸಾವಿರ ವಸೂಲಿ ಮಾಡಲಾಗುತ್ತದೆ. ಇನ್ನೂ ಐಬಿ ವಾಟರ್ ಫಾಲ್ಸ್ ಬಳಿ ತೆಪ್ಪ ಹಾಕುವವರು ಒಮ್ಮೆ ಸವಾರಿ ಮಾಡಿದರೆ ಒಬ್ಬವ್ಯಕ್ತಿಗೆ ₹1ರಿಂದ ₹2 ಸಾವಿರ ಶುಲ್ಕ ವಿಧಿಸುತ್ತಾರೆ. ತೆಪ್ಪದ ಅಗಲಕ್ಕೆ ತಕ್ಕಂತೆ 6ರಿಂದ 11 ಜನ ಒಮ್ಮೆ ಸವಾರಿ ಮಾಡಬಹುದು.
ಅಧಿಕಾರಿಗಳಿಗೂ ಪಾಲು: ಸಾಣಾಪುರ ಕೆರೆ ಮತ್ತು ವಾಟರ್ ಫಾಲ್ಸ್ ಅರಣ್ಯ, ಕಂದಾಯ, ಪ್ರವಾಸೋದ್ಯಮ, ಗ್ರಾ.ಪಂ ವ್ಯಾಪ್ತಿಗೆ ಬರಲಿದ್ದು, ಇಲ್ಲಿ, ಅಕ್ರಮ ಚಟುವಟಿಕೆಗಳು ನಡೆದರೂ ತೆಪ್ಪ ಹಾಕುವವರಿಂದ ಹಣ ಪಡೆದು ಸುಮ್ಮನಿದ್ದಾರೆ ಎಂದು ಕೆಲ ಗ್ರಾಮಸ್ಥರು ದೂರುತ್ತಾರೆ.
ಗಂಗಾವತಿ ಮೂಲದವರೊಬ್ಬರು ಟೆಂಡರ್ ಮೂಲಕ ಸಾಣಾಪುರ ಕೆರೆ, ವಾಟರ್ ಫಾಲ್ಸ್ನಲ್ಲಿ ಮೀನು ಹಿಡಿಯಲು ಪರವಾನಗಿ ಪಡೆದು, ತೆಪ್ಪ ಹಾಕುವವರಿಗೆ ಅವಕಾಶ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ತೆಪ್ಪಹಾಕುವವರೊಬ್ಬರು ಮಾಹಿತಿ ನೀಡಿದರು.
ತೆಪ್ಪ ಹಾಕುವವರಲ್ಲಿ ಗುಂಪುಗಾರಿಕೆ ದರಪಟ್ಟಿ ಅಳವಡಿಕೆಯಿಲ್ಲ ಅಧಿಕಾರಿಗಳಿಗೂ ಪಾಲು ಆರೋಪ
ಕಾನೂನು ಬಾಹಿರವಾಗಿ ತೆಪ್ಪ ಹಾಕುತ್ತಿರುವ ವಿಷಯ ಗಮನಕ್ಕೆ ಬಂದಿದ್ದು ಜಂಟಿ ಇಲಾಖೆಗಳ ನೇತೃತ್ವದಲ್ಲಿ ಎಲ್ಲ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗುತ್ತದೆವತ್ಸಲಾ ಸಾಣಾಪುರ ಗ್ರಾ.ಪಂ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.